ADVERTISEMENT

ಶಿವಸೇನಾದ 35 ಶಾಸಕರಿಗೆ ಅಸಮಾಧಾನ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ: ರಾಣೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 9:35 IST
Last Updated 12 ಜನವರಿ 2020, 9:35 IST
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ   

ಥೇನ್: ಶಿವಸೇನಾದ 56 ಶಾಸಕರಲ್ಲಿ 35 ಶಾಸಕರು ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಹೇಳಿದ್ದಾರೆ.

ಸದ್ಯ ರಾಜ್ಯಸಭಾ ಸದಸ್ಯರಾಗಿರುವರಾಣೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಕಾರ್ಯನಿರ್ವಹಿಸದ ಸರ್ಕಾರ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಸರ್ಕಾರ ರಚಿಸಲು ಐದು ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿವೆ.ಇಂತಹ ಸರ್ಕಾರದಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಸರ್ಕಾರ ನಡೆಸುವ ಕುರಿತು ಅವರಿಗೆ ಏನೊಂದು ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯು ಮತ್ತೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿಯು 105 ಶಾಸಕರನ್ನು ಹೊಂದಿದೆ. ಶಿವಸೇನಾ ಕೇವಲ 56 ಶಾಸಕರನ್ನು ಹೊಂದಿದ್ದರೂ ಅದರಲ್ಲಿ 35 ಶಾಸಕರಿಗೆಅಸಮಾಧಾನವಿದೆ ಎಂದು ದೂರಿದರು.

ADVERTISEMENT

ರೈತರ ಸಾಲಮನ್ನಾ ಮಾಡುವ ಮಹಾರಾಷ್ಟ್ರ ಸರ್ಕಾರದ ಭರವಸೆ 'ಟೊಳ್ಳಾಗಿದೆ' ಏಕೆಂದರೆ ಅದು ಯಾವಾಗ ಜಾರಿಗೆ ಬರಲಿದೆ ಎಂಬುದರ ಬಗ್ಗೆ ಸೂಕ್ತ ಸಮಯವನ್ನು ನಿಗದಿ ಮಾಡಿಲ್ಲ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಔರಂಗಾಬಾದ್‌ಗೆ ಗುರುವಾರ ಭೇಟಿ ನೀಡಿದ್ದನ್ನು ಉಲ್ಲೇಖಿಸಿದ ರಾಣೆ, ಯಾವುದೇ ಯೋಜನೆಗಳನ್ನು ಘೋಷಿಸದೆ ಅಥವಾ ಈ ಪ್ರದೇಶಕ್ಕೆ ಯಾವುದೇ ಹಣವನ್ನು ನೀಡದೆ ವಾಪಸ್ಸಾಗಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಮತ್ತು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‌ಎಸ್) ಮೈತ್ರಿ ಕುರಿತಂತೆ ಮಾತನಾಡಲು ನಿರಾಕರಿಸಿದ ಅವರು, ಈ ಕುರಿತು ಬಿಜೆಪಿ ಅಧ್ಯಕ್ಷರು ಮಾತನಾಡುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.