ತಿರುವನಂತಪುರಂ: ಕೇರಳದಲ್ಲಿ ಶುಕ್ರವಾರ 39 ಜನರಿಗೆ ಕೋವಿಡ್-19 ರೋಗ ಇರುವುದಾಗಿ ದೃಢಪಟ್ಟಿದೆ. ಇದರಲ್ಲಿ 34 ಮಂದಿ ಕಾಸರಗೋಡಿನವರಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ, ಕೇರಳದ ಎಲ್ಲ ಜಿಲ್ಲೆಗಳಲ್ಲಿಯೂ ಸೋಂಕುವ್ಯಾಪಿಸಿರುವುದಾಗಿ ಹೇಳಿದ್ದಾರೆ. ಕಣ್ಣೂರ್ ಜಿಲ್ಲೆಯಲ್ಲಿ - 2, ತ್ರಿಶ್ಶೂರ್, ಕೋಯಿಕ್ಕೋಡ್, ಕೊಲ್ಲಂ ಜಿಲ್ಲೆಗಳಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.ಕೊಲ್ಲಂ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಪ್ರಕರಣ ವರದಿಯಾಗಿದೆ. ಕೇರಳದಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವವರು 164 ಆಗಿದ್ದು, ಈ ಪೈಕಿ 112 ಮಂದಿ ಆಸ್ಪತ್ರೆಯಲ್ಲಿದ್ದಾರೆ.
ಒಟ್ಟು 1,10,299 ಮಂದಿ ಮೇಲೆನಿಗಾ ಇರಿಸಲಾಗಿದ್ದು,616 ಮಂದಿಯನ್ನು ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದೆ.1,09,683 ಮಂದಿಯನ್ನು ಮನೆಯಲ್ಲಿಯೇ ನಿಗಾ ಇರಿಸಲಾಗಿದೆ. 5679 ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. 4448 ಮಂದಿಗೆಸೋಂಕು ಇಲ್ಲ ಎಂಬ ವರದಿ ಬಂದಿದೆ.
ಇವತ್ತು ಅತೀ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಕೊರೊನಾ ನಿಯಂತ್ರಣಕ್ಕಿರುವ ಎಲ್ಲ ಕ್ರಮಗಳನ್ನು ಮತ್ತಷ್ಟು ಕಟ್ಟುನಿಟ್ಟಿನಿಂದ ಕೈಗೊಳ್ಳಲಾಗುವುದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.