ADVERTISEMENT

ದೀದಿ ಧರಣಿಯಲ್ಲಿದ್ದ ಐವರು ಪೊಲೀಸ್‌ ಅಧಿಕಾರಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ

ಪದಕಗಳನ್ನು ಹಿಂಪಡೆಯುವ ಸಾಧ್ಯತೆ

ಏಜೆನ್ಸೀಸ್
Published 7 ಫೆಬ್ರುವರಿ 2019, 13:16 IST
Last Updated 7 ಫೆಬ್ರುವರಿ 2019, 13:16 IST
   

ನವದೆಹಲಿ: ಕೋಲ್ಕತ್ತದಲ್ಲಿ ಸಿಬಿಐ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಐವರು ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕರಕ್ಕೆ ಸೂಚಿಸಿದೆ. ಅಖಿಲ ಭಾರತೀಯ ಸೇವೆಗಳ ನಿಯಮಗಳ ಅನುಸಾರ ಅಧಿಕಾರಿಗಳ ಪದಕಗಳನ್ನು ಕಳಚುವಂತೆ ಸೂಚಿಸುವ ಸಾಧ್ಯತೆಗಳೂ ಹೆಚ್ಚಿವೆ.

ಕೇಂದ್ರ ಸರ್ಕಾರ ಅಧಿಕಾರಿಗಳನ್ನು ಕೇಂದ್ರದ ಸೇವೆಗಳಿಂದ ಕೆಲ ಸಮಯದ ವರೆಗೂ ನಿರ್ಬಂಧಿಸುವ ಸಾಧ್ಯತೆ ಇರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಮೂಲಕಗಳ ಪ್ರಕಾರ, ಕೇಂದ್ರ ಸರ್ಕಾರ ಗುರಿಯಾಗಿಸಿರುವ ಐವರು ಪೊಲೀಸ್‌ ಅಧಿಕಾರಿಗಳು–ಪಶ್ಚಿಮ ಬಂಗಾಳ ಡಿಜಿಪಿ ವಿರೇಂದ್ರ, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ವಿನೀತ್‌ ಕುಮಾರ್‌ ಗೋಯಲ್‌, ಹೆಚ್ಚುವರಿ ಪೊಲೀಸ್‌ ‍‍ಪ್ರಧಾನ ನಿರ್ದೇಶಕ(ಕಾನೂನು ಮತ್ತು ಸುವ್ಯವಸ್ಥೆ) ಅನುಜ್‌ ಶರ್ಮಾ, ಪೊಲೀಸ್‌ ಕಮಿಷನರ್‌ ಗ್ಯಾನವಂತ್‌ ಸಿಂಗ್‌ ಹಾಗೂ ಹೆಚ್ಚುವರಿ ಪೊಲೀಸ್‌ ಆಯುಕ್ತ(ಕೋಲ್ಕತ್ತ) ಸುಪ್ರತಿಮ್‌ ದರ್ಕಾರ್‌.

ADVERTISEMENT

ಪೊಲೀಸ್‌ ಅಧಿಕಾರಿಗಳು ತಟಸ್ಥ ನಿಲುವು ಹೊಂದಿರಬೇಕಿತ್ತು. ಆದರೆ, ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಅವರು ರಾಜಕೀಯ ನಿಲುವು ಪಡೆದಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಕೇಂದ್ರದ ಆದೇಶವನ್ನು ಪಶ್ಚಿಮ ಬಂಗಾಳ ಕಟ್ಟು ನಿಟ್ಟಾಗಿ ಪಾಲಿಸುವ ಪರಿಪಾಠ ಬೆಳೆಸಿಕೊಂಡಿರದ ಕಾರಣ, ಈ ಆದೇಶ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ಸರ್ಕಾರಗಳ ನಡುವೆ ಘರ್ಷಣೆಯನ್ನು ಹೆಚ್ಚಿಸಬಹುದಾಗಿದೆ.

ಶಾರದಾ ಮತ್ತು ರೋಸ್‌ ವ್ಯಾಲಿ ಚಿಟ್‌ ಫಂಡ್‌ ಹಗರಣದ ಸಂಬಂಧ ಫೆ.4ರಂದು ಕೋಲ್ಕತ್ತ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಲು ಮುಂದಾಗಿದ್ದರು. ಇದರ ಬೆನ್ನಲೇ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಧೋರಣೆ ಹಾಗೂ ಸಿಬಿಐ ಕ್ರಮವನ್ನು ವಿರೋಧಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು. ಪೊಲೀಸ್‌ ರಾಜೀವ್‌ ಕುಮಾರ್‌ ಸಿಬಿಐ ವಿಚಾರಣೆ ಹಾಜರಾಗಬೇಕು, ಆದರೆ ಅವರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿತ್ತು. ಅದೇ ದಿನ ಸಂಜೆ ಮಮತಾ ಬ್ಯಾನರ್ಜಿ ಧರಣಿ ಅಂತ್ಯಗೊಳಿಸಿದ್ದರು.

ಅಖಿಲ ಭಾರತೀಯ ಸೇವೆಗಳ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಗಳನ್ನು ನೀಡಿ ಕೋಲ್ಕತ್ತ ಪೊಲೀಸ್‌ ಆಯುಕ್ತರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರ ಹಲವು ಬಾರಿ ಪಶ್ಚಿಮ ಬಂಗಾಳ ಸರ್ಕಾರಕ್ಕ ತಿಳಿಸಿದೆ ಎನ್ನಲಾಗಿದೆ. ಆದರೆ, ಕೇಂದ್ರದಿಂದ ಯಾವುದೇ ಮನವಿ ಸ್ವೀಕರಿಸಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.