ನವದೆಹಲಿ: ಮುಂಬೈನಲ್ಲಿ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಗುಜರಾತಿನ ಶಾಸಕ ಜಿಗ್ನೇಶ್ ಮೆವಾನಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಕೇಂದ್ರ ಸರ್ಕಾರ ತನ್ನ ಮೇಲೆ ಹಗೆ ಸಾಧಿಸುತ್ತಿದೆ ಎಂದು ಆರೋಪಿಸಿದ ಮೆವಾನಿ ಮಹಾರಾಷ್ಟ್ರದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಮೋದಿ ಮೌನ ಮುರಿಯಬೇಕು ಎಂದಿದ್ದಾರೆ.
ಭೀಮಾ–ಕೋರೆಗಾಂವ್ ಸಮರದ 200ನೇ ವಾರ್ಷಿಕೋತ್ಸವದ ಪ್ರಯುಕ್ತ ಪುಣೆಯ ಶನಿವಾರ್ವಾಡಾದಲ್ಲಿ ಕಳೆದ ಡಿ. 31ರಂದು ಏರ್ಪಡಿಸಿದ್ದ ‘ಎಲ್ಗರ್ ಪರಿಷತ್’ ಕಾರ್ಯಕ್ರಮದಲ್ಲಿ ‘ಪ್ರಚೋದನಕಾರಿ’ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ಮೆವಾನಿ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೆವಾನಿ ತಮ್ಮ ಭಾಷಣದಲ್ಲಿ ಒಂದೇ ಒಂದು ಪ್ರಚೋದನಾಕಾರಿ ಪದವಿರಲಿಲ್ಲ ಎಂದಿದ್ದಾರೆ.
ಬಿಜೆಪಿಗೆ ನನ್ನನ್ನು ಕಂಡರೆ ಭಯ. ಗುಜರಾತ್ ಚುನಾವಣೆಯ ನಂತರ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಜಾತಿಗಳು ಇಲ್ಲದೇ ಇರುವ ಭಾರತವನ್ನು ಭಯಸುತ್ತೇವೆ. ಭೀಮಾ–ಕೋರೆಗಾಂವ್ ಸಮರದ 200ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಾಂತಿಯುತವಾಗಿ ರ್ಯಾಲಿ ನಡೆಸಲು ದಲಿತರಿಗೆ ಹಕ್ಕು ಇಲ್ಲವೇ? ದೇಶದಲ್ಲಿ ದಲಿತ ಮತ್ತು ಇತರ ಅಲ್ಪ ಸಂಖ್ಯಾತ ಸಮುದಾಯದವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಜನವರಿ 9ರಂದು ನವದೆಹಲಿಯಲ್ಲಿ ಯುವ ಅಹಂಕಾರ್ (ಯುವಜನರ ಹೆಮ್ಮೆ) ರ್ಯಾಲಿಯನ್ನು ಆಯೋಜಿಸಲಿದ್ದೇವೆ ಎಂದಿದ್ದಾರೆ ಮೆವಾನಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.