ನವದೆಹಲಿ: ಸಾಮಾಜಿಕ ಸಂದೇಶ ನೀಡುವುದು ಇಂದಿನ ಚಿತ್ರರಂಗದ ಟ್ರೆಂಡ್ ಎನಿಸಿದೆ. ಆದರೆ, ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳ ಮೂಲಕ ಸಂದೇಶ ನೀಡಬೇಕು ಎಂದು ಬಯಸಬಾರದು ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
‘ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ. ಸಿನಿಮಾ ಸೇವಾ ಕಾರ್ಯವಲ್ಲ ಅಥವಾ ಎನ್ಜಿಒ ಅಲ್ಲ. ಎಷ್ಟೊಂದು ಪ್ರೇಮಕತೆಗಳನ್ನು ಸಿನಿಮಾಗಳಲ್ಲಿ ತೋರಿಸಿದ್ದೇವೆ. ಆದರೆ, ಜನಕ್ಕೆ ಪ್ರೀತಿಸುವುದು ಹೇಗೆಂದು ಇನ್ನೂ ತಿಳಿದಿಲ್ಲ. ಒಂದುವೇಳೆ ಸಿನಿಮಾದಲ್ಲಿ ಸಂದೇಶವನ್ನು ನೀಡಿದರೂ, ಆ ಕ್ಷಣ ಚಪ್ಪಾಳೆ ಹೊಡೆಯುತ್ತಾರೆ, ನಂತರ ಮರೆತುಬಿಡುತ್ತಾರೆ. ಸಿನಿಮಾ ನಿರ್ಮಾಪಕನಾಗಿ ನನಗೆ ಸಂದೇಶ ನೀಡುವುದರಲ್ಲಿ ನಂಬಿಕೆ ಇಲ್ಲ’ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
‘ಪದ್ಮಾವತ್’ ಸಿನಿಮಾವನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸೂಚಿಸಿದೆ. ನನಗೆ ಅಂಥಾ ಅನುಭವವಾಗಿಲ್ಲ. ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ಅವರ ಜೊತೆ ನನ್ನ ಅನುಭವ ಹೀಗಿರಲಿಲ್ಲ. ಅಕ್ಷರಶಃ ಒಬ್ಬ ಸಿನಿಮಾ ನಿರ್ಮಾಪಕನಿಗೆ ಸಲ್ಲಬೇಕಿರುವ ಗೌರವ, ಅವಕಾಶವನ್ನು ಅವರು ನೀಡಿದ್ದರು. ನನಗೆ ನನ್ನ ಚಿತ್ರದಲ್ಲಿನ ಸನ್ನಿವೇಶವನ್ನು ವಿವರಿಸಲು ಅವಕಾಶ ಸಿಕ್ಕಿತ್ತು’ ಎಂದು ಹೇಳಿದ್ದಾರೆ.
‘ಪದ್ಮಾವತ್ ಸಿನಿಮಾದ ವಿಷಯದಲ್ಲಿ ಏನಾಗಿದೆ ಎಂಬುದು ಸಂಜಯ್ ಲೀಲಾ ಬನ್ಸಾಲಿ ಅವರಿಗಷ್ಟೇ ಗೊತ್ತು. ಸಿನಿಮಾವನ್ನು ಸಿಬಿಎಫ್ಸಿ ಕತ್ತರಿಸುವಂತಿಲ್ಲ ಎಂದು ಯಾವಾಗಲೂ ಹೇಳುತ್ತಿರುತ್ತೇನೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.