ನವದೆಹಲಿ: ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್.ಲೋಯ ಅವರ ಶಂಕಾಸ್ಪದ ಸಾವಿನ ಪ್ರಕರಣ(2014)ಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಹಾಗೂ ನಾಗ್ಫುರ ಪೀಠದಲ್ಲಿ ಬಾಕಿ ಉಳಿದಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವರ್ಗಾಯಿಸುವಂತೆ ಆದೇಶಿಸಿದೆ.
ನ್ಯಾಯಾಧೀಶ ಲೋಯ ಅವರ ಸಾವಿಗೆ ಸಂಬಂಧಿಸಿದಂತೆ ಈವರೆಗೂ ಸಲ್ಲಿಕೆಯಾಗಿರದ ಎಲ್ಲ ದಾಖಲೆಗಳನ್ನು ಪಟ್ಟಿಮಾಡಿ, ಮುಂದಿನ ವಿಚಾರಣೆ ವೇಳೆಗೆ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಹೊಸ ತ್ರಿಸದಸ್ಯ ಪೀಠವು ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಈ ಪೀಠದಲ್ಲಿದ್ದು, ಫೆ.2ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. ಲೋಯ ಅವರ ಸಾವಿನ ಪ್ರಕರಣದ ಕುರಿತು ಯಾವುದೇ ಅರ್ಜಿ ಸ್ವೀಕರಿಸದಂತೆ ದೇಶದ ಎಲ್ಲ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಈ ಹಿಂದೆ ಕಿರಿಯ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಲೋಯ ಪ್ರಕರಣದ ವಿಚಾರಣೆ ನಡೆಸಿತ್ತು. ಗಂಭೀರವಾದ ಪ್ರಕರಣ ವಿಚಾರಣೆಯನ್ನು ಕಿರಿಯ ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ನೀಡಿದ್ದು ಸುಪ್ರೀಂ ಕೋರ್ಟ್ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ಈ ಬೆಳವಣಿಗೆಯ ನಂತರ ಅರುಣ್ ಮಿಶ್ರಾ ಮತ್ತು ಮೋಹನ್ ಎಂ.ಶಾಂತನಗೌಡರ ಅವರ ಪೀಠ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗೆ ವಹಿಸಿತ್ತು.
ಪ್ರಕರಣದ ಹಿನ್ನೆಲೆ:
* ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣವನ್ನು ಲೋಯ ವಿಚಾರಣೆ ನಡೆಸುತ್ತಿದ್ದರು
*ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈಗ ಖುಲಾಸೆಯಾಗಿದ್ದಾರೆ
*2014ರ ಡಿಸೆಂಬರ್ನಲ್ಲಿ ಸಹೋದ್ಯೋಗಿಯ ಮಗಳ ಮದುವೆಗೆಂದು ನಾಗಪುರಕ್ಕೆ ಹೋಗಿದ್ದಾಗ ಲೋಯ ಸಾವು
*ಸಾವಿನ ಬಗ್ಗೆ ಅವರ ಕುಟುಂಬ ವ್ಯಕ್ತಪಡಿಸಿದ ಶಂಕೆ ಆಧರಿಸಿ ‘ದಿ ಕ್ಯಾರವಾನ್’ ವಿಸ್ತೃತ ವರದಿ ಪ್ರಕಟಿಸಿತ್ತು.
ದಿ ಕ್ಯಾರವಾನ್ ವಿಸ್ತೃತ ವರದಿ: ಸೊಹ್ರಾಬುದ್ದೀನ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ನಿಗೂಢ ಸಾವಿನ ಹಿಂದಿವೆ ಹಲವು ಪ್ರಶ್ನೆಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.