ನವದೆಹಲಿ: ರೈತರ ಹಿತರಕ್ಷಣೆ ಉದ್ದೇಶದಿಂದ ₹ 500 ಕೋಟಿ ಮೂಲನಿಧಿಯ ’ಮಾರುಕಟ್ಟೆ ಭರವಸೆ ಯೋಜನೆ’ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಉದ್ದೇಶಿತ ಯೋಜನೆಯಿಂದ ಆಹಾರ ಧಾನ್ಯಗಳ ಸಂಗ್ರಹ ವ್ಯವಸ್ಥೆ ಇನ್ನಷ್ಟು ಉತ್ತಮವಾಗಲಿದೆ. ಮಾರುಕಟ್ಟೆಯ ಅನಿಶ್ಚಿತ ಸ್ಥಿತಿಯಿಂದಲೂ ರೈತರಿಗೆ ರಕ್ಷಣೆ ಸಿಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫಸಲಿನ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತಲೂ (ಎಂಎಸ್ಪಿ) ಕಡಿಮೆಯಾದಾಗ ಈ ಯೋಜನೆಯಡಿ ರಾಜ್ಯಗಳು ರೈತರಿಂದ ಬೆಳೆಯನ್ನು ಖರೀದಿಸಲಿವೆ. ಯೋಜನೆಯ ಸಂಪೂರ್ಣ ಜವಾಬ್ದಾರಿ ರಾಜ್ಯಗಳಿಗೆ ನೀಡಲು ನಿರ್ಧರಿಸಲಾಗಿದೆ.
ಬೆಲೆ ಕುಸಿದ ಸಂದರ್ಭದಲ್ಲಿ, ಗೋಧಿ ಮತ್ತು ಭತ್ತವನ್ನು ಬಿಟ್ಟು ಉಳಿದೆಲ್ಲಾ ಬೆಳೆಗಳನ್ನು ರಾಜ್ಯಗಳು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಲಿವೆ. ಇದರಿಂದ ರಾಜ್ಯಗಳಿಗೆ ನಷ್ಟವಾದರೆ, ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯ ಗರಿಷ್ಠ ಶೇ 40ರವರೆಗೂ ಪರಿಹಾರ ನೀಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.