ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಮಾರ್ಚ್ 14ಕ್ಕೆ ಮುಂದೂಡಿತು.
ಪ್ರಕರಣ ಸಂಬಂಧ ಅಲಹಾಬಾದ್ ಹೈ ಕೋರ್ಟ್ಗೆ ನೀಡಿದ್ದ ದಾಖಲಾತಿಗಳ ಎಲ್ಲಾ ಪ್ರತಿಗಳನ್ನು ಭಾಷಾಂತರಿಸಿ ಎರಡು ವಾರಗಳ ಒಳಗೆ ಸಲ್ಲಿಸುವಂತೆ ನ್ಯಾಯಾಲಯ ಕೇಳಿದೆ.
ಹೈ ಕೋರ್ಟ್ನ ಎಲ್ಲಾ ದಾಖಲೆಗಳ ಜತೆಗೆ, ವಿಡಿಯೊ ಚಿತ್ರೀಕರಣದ ಪ್ರತಿಗಳನ್ನೂ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಜಟಾಪಟಿ
ಅತ್ಯಂತ ಭಾವನಾತ್ಮಕವಾದ ಅಯೋಧ್ಯೆಯ ರಾಮಮಂದಿರ–ಬಾಬರಿ ಮಸೀದಿ ವಿವಾದದ ಅಂತಿಮ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಡಿ.5ರಂದು ಆರಂಭವಾಗುವ ಮೊದಲೇ ನ್ಯಾಯಮೂರ್ತಿಗಳು ಮತ್ತು ಸುನ್ನಿ ವಕ್ಫ್ ಮಂಡಳಿ ಪರ ವಕೀಲರ ನಡುವೆ ಜಟಾಪಟಿಯೇ ನಡೆದಿತ್ತು.
ಅಂತಿಮ ವಿಚಾರಣೆಯನ್ನು ಶೀಘ್ರವೇ ಆರಂಭಿಸುವುದಕ್ಕೆ ಸುನ್ನಿ ವಕ್ಫ್ ಮಂಡಳಿ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ದುಶ್ಯಂತ ದವೆ ಮತ್ತು ರಾಜೀವ್ ಧವನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಅಂತಿಮ ವಿಚಾರಣೆ ಆರಂಭವನ್ನು 2018ರ ಫೆಬ್ರುವರಿ 8ಕ್ಕೆ ನಿಗದಿ ಮಾಡಿತ್ತು.
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.