ನವದೆಹಲಿ: ಆಧಾರ್ ಜೋಡಣೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ನ್ಯಾಯವಾಗಿ ದೊರೆಯಬೇಕಾಗಿರುವ ಸೌಲಭ್ಯ ಸಿಗದಿರದು ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಹೇಳಿದೆ.
ಬಯೊಮೆಟ್ರಿಕ್ ಹೊಂದಾಣಿಕೆ ಆಗದಿದ್ದರೆ ಆಧಾರ್ ಗುರುತು ಚೀಟಿಯ ಪ್ರತಿ ಅಥವಾ ಆಧಾರ್ ನೋಂದಣಿ ಮಾಡಿದಾಗ ನೀಡಲಾಗುವ ನಮೂನೆಯನ್ನು ಸಲ್ಲಿಸಿದರೆ ಸಾಕು. ಜನರಿಗೆ ನೀಡಬೇಕಿರುವ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿ ರಾಜ್ಯಗಳಿಗೆ ಕೇಂದ್ರ ಸಂಪುಟ ಕಾರ್ಯದರ್ಶಿ ಸೂಚನೆ ಕಳುಹಿಸಿದ್ದಾರೆ ಎಂದು ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸು
ತ್ತಿರುವ ಸಂವಿಧಾನ ಪೀಠಕ್ಕೆ ತಿಳಿಸಲಾಗಿದೆ.
ಸಮರ್ಪಕವಾದ ಗುರುತು ದೃಢೀಕರಣ ವ್ಯವಸ್ಥೆ ಜಾರಿಗೆ ಬರುವ ತನಕ ಪಿಂಚಣಿದಾರರು ಮತ್ತು ದುರ್ಬಲ ವರ್ಗಗಳ ಜನರು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಲ್ಲವೇ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪ್ರಶ್ನಿಸಿದ ಬಳಿಕ ಸರ್ಕಾರ ಈ ಭರವಸೆ ನೀಡಿತು.
ಆನ್ಲೈನ್ ದೃಢೀಕರಣ ಸಾಧ್ಯವಾಗದಿದ್ದರೆ ಆಧಾರ್ ಗುರುತು ಚೀಟಿ ಹಾಜರುಪಡಿಸಿದರೆ ಸಾಕು ಎಂಬುದನ್ನು ಕಳೆದ ಡಿಸೆಂಬರ್ನಲ್ಲಿಯೇ ತಿಳಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.