ADVERTISEMENT

ವಿದೇಶಕ್ಕೆ ಹೋದಾಗ ನೀರವ್ ಮೋದಿಯನ್ನು ಕರೆತನ್ನಿ: ಪ್ರಧಾನಿಗೆ ರಾಹುಲ್ ಗಾಂಧಿ ಸಲಹೆ

ಏಜೆನ್ಸೀಸ್
Published 21 ಫೆಬ್ರುವರಿ 2018, 6:42 IST
Last Updated 21 ಫೆಬ್ರುವರಿ 2018, 6:42 IST
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)   

ಮೇಂಡಿಪಥಾರ್ (ಮೇಘಾಲಯ): ಮುಂದಿನ ಬಾರಿ ವಿದೇಶ ಪ್ರವಾಸ ಕೈಗೊಂಡು ಮರಳಿ ಬರುವಾಗ ನೀರವ್ ಮೋದಿಯನ್ನು ಕರೆತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ಮೇಘಾಲಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜನರು ಕಠಿಣ ಶ್ರಮದಿಂದ ದುಡಿದು ಸಂಪಾದಿಸಿದ ಹಣದೊಂದಿಗೆ ನೀರವ್ ಪರಾರಿಯಾಗುವಾಗ ಕೇಂದ್ರ ಸರ್ಕಾರ ನಿದ್ರಿಸುತ್ತಿತ್ತು ಎಂದು ಅವರು ಟೀಕಿಸಿದ್ದಾರೆ.

‘ಕೆಲವು ವರ್ಷಗಳ ಹಿಂದೆ ಇನ್ನೊಬ್ಬ ಮೋದಿ (ಪ್ರಧಾನಿ ಕುರಿತು) ಬಂದಿದ್ದರು. ನೀರವ್ ಮೋದಿ ಜನರಿಗೆ ಕನಸುಗಳನ್ನು ಮಾರಾಟ ಮಾಡಿದಂತೆ ಅವರೂ ಮಾಡಿದ್ದರು. ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೂ ₹ 15 ಲಕ್ಷ, ಅಚ್ಛೇದಿನ್, ಎರಡು ಕೋಟಿ ಉದ್ಯೋಗ ಸೃಷ್ಟಿ ಮತ್ತಿತರ ಕನಸುಗಳನ್ನು ಅವರು ಜನರಿಗೆ ಮಾರಾಟ ಮಾಡಿದ್ದರು’ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ADVERTISEMENT

‘2014ರ ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿ ನೀಡಿದ್ದ ಭರವಸೆಗಳಿಂದಾಗಿ ಜನ ಆ ಪಕ್ಷದ ಬಗ್ಗೆ ನಂಬಿಕೆ ಇರಿಸಿಕೊಂಡಿದ್ದರು. ತಮ್ಮ ಕಠಿಣ ಶ್ರಮಕ್ಕೆ ಗೌರವ ಸಿಗಲಿದೆ, ಬೆಳೆಗೆ ಉತ್ತಮ ಬೆಲೆ ದೊರೆಯಲಿದೆ ಎಂದು ರೈತರು ಭಾವಿಸಿದ್ದರು. ಆದರೆ ಈ ಸರ್ಕಾರ ನಿರುದ್ಯೋಗ, ಭಯ, ದ್ವೇಷ ಮತ್ತು ಹಿಂಸೆಯಿಂದ ಕೂಡಿದ ನಿರಾಶಾವಾದವನ್ನಷ್ಟೇ ನೀಡಿದೆ. ವಿಜಯ್ ಮಲ್ಯ ಮತ್ತು ನೀರವ್ ಮೋದಿ ಪ್ರಕರಣದಿಂದಾಗಿ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಗೊಳಿಸುವ ಬದಲು ತಾನೇ ಅದರಲ್ಲಿ ಭಾಗಿಯಾಗುತ್ತಿರುವುದನ್ನು ಕಾಣಬಹುದು’ ಎಂದು ರಾಹುಲ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.