ADVERTISEMENT

ಉತ್ತರ ಪ್ರದೇಶ: ಮಳೆ ಅವಘಡದಿಂದ 10 ಮಂದಿ ಸಾವು

ಪಿಟಿಐ
Published 22 ಸೆಪ್ಟೆಂಬರ್ 2022, 12:52 IST
Last Updated 22 ಸೆಪ್ಟೆಂಬರ್ 2022, 12:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಟಾವಾ: ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇಟಾವಾ ಜಿಲ್ಲೆಯಲ್ಲಿ 7 ಮಂದಿ, ಫಿರೋಜಾಬಾದ್‌ನಲ್ಲಿ ಇಬ್ಬರು ಹಾಗೂ ಬಲರಾಮ್‌ಪುರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ವಿವಿಧೆಡೆ ಸಿಡಿಲು ಬಡಿದು 11 ಮಂದಿ ಗಾಯಗೊಂಡಿದ್ದಾರೆ ಎಂದೂ ವಿವರಿಸಿದ್ದಾರೆ.

ಇಟಾವಾ ಜಿಲ್ಲೆಯ ಚಂದ್ರಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಮನೆಯ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಕೃಪಾಲ್‌ಪುರ ಗ್ರಾಮದಲ್ಲಿ ಪೆಟ್ರೋಲ್‌ ಬಂಕೊಂದರ ಗೋಡೆ ಕುಸಿದು ಇಬ್ಬರು ಹಾಗೂ ಚಕ್ರನಗರ ‍ಪ್ರದೇಶದಲ್ಲಿ ಮನೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಉತ್ತರಾಖಂಡದಲ್ಲಿ ಭಾರಿ ಮಳೆ (ಡೆಹ್ರಾಡೂನ್‌ ವರದಿ): ಉತ್ತರಾಖಂಡದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ.

ಉತ್ತರಕಾಶಿ ಜಿಲ್ಲೆಯ ಕುಮ್ರಾಡ ಗ್ರಾಮದಲ್ಲಿ ಮಳೆಗೆ ಮನೆಯೊಂದು ಕುಸಿದಿದ್ದು, ಅದರೊಳಗೆ ಸಿಲುಕಿಕೊಂಡಿರುವ ಮಹಿಳೆಯ ರಕ್ಷಣೆಗಾಗಿ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭೂಕುಸಿತದ ಪರಿಣಾಮ ಹಲವು ಹೆದ್ದಾರಿಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದ 100ಕ್ಕೂ ಹೆಚ್ಚು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಡೆಹ್ರಾಡೂನ್‌ನಲ್ಲಿ ಎರಡನೇ ದಿನವೂ ಭಾರಿ ಮಳೆ ಮುಂದುವರಿದಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ ಎಂದಿದ್ದಾರೆ.

ದೆಹಲಿಯಲ್ಲೂ ಮಳೆ: ದೆಹಲಿಯಲ್ಲಿ ಗುರುವಾರವೂ ಸಾಧಾರಣ ಮಳೆಯಾಗಿದ್ದು, ನಗರದ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.