ADVERTISEMENT

ದೆಹಲಿ ಹಿಂಸಾಚಾರ ನಿಯಂತ್ರಣಕ್ಕೆ 7000 ಅರೆಸೇನಾ ಸಿಬ್ಬಂದಿ ನೇಮಕ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 5:26 IST
Last Updated 28 ಫೆಬ್ರುವರಿ 2020, 5:26 IST
ಈಶಾನ್ಯ ದೆಹಲಿಯಲ್ಲಿ ಭದ್ರತಾ ಪಡೆಗಳ ರಕ್ಷಣೆಯಲ್ಲಿ ಮನೆಗೆ ತೆರಳುತ್ತಿರುವ ಮಹಿಳೆ.
ಈಶಾನ್ಯ ದೆಹಲಿಯಲ್ಲಿ ಭದ್ರತಾ ಪಡೆಗಳ ರಕ್ಷಣೆಯಲ್ಲಿ ಮನೆಗೆ ತೆರಳುತ್ತಿರುವ ಮಹಿಳೆ.   

ನವದೆಹಲಿ: ತಲಾ 100 ಮಂದಿಯಿರುವ 70 ಅರೆಸೇನಾ ತುಕಡಿಗಳನ್ನು ಈಶಾನ್ಯ ದೆಹಲಿಗೆ ನಿಯೋಜಿಸಲಾಗಿದೆ. ಕಳೆದ 36 ಗಂಟೆಗಳಲ್ಲಿ ದೊಡ್ಡಮಟ್ಟದ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.

ದೆಹಲಿ ಪೊಲೀಸರನ್ನು ನಿಯಂತ್ರಿಸುವಕೇಂದ್ರ ಗೃಹ ಸಚಿವಾಲಯವು ಈವರೆಗೆ 514 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ತನಿಖೆ ಪ್ರಗತಿ ಕಂಡಂತೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸಂಜೆ ನಡೆದ ಸಭೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸಭೆಯಲ್ಲಿ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್ ಭಲ್ಲಾ ಮತ್ತು ದೆಹಲಿ ಪೊಲೀಸ್ ಆಯುಕ್ತರಾದ ಅಮುಲ್ಯ ಪಟ್ನಾಯಕ್ ಪಾಲ್ಗೊಂಡಿದ್ದರು ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ. ಆದರೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್ ಅವರ ಬಗ್ಗೆ ಹೇಳಿಕೆಯಲ್ಲಿ ಯಾವುದೇ ಉಲ್ಲೇಖವಿಲ್ಲ.

ಹಿಂಸಾಚಾರ ಪೀಡಿತ ದೊಭಾಲ್ ಈಶಾನ್ಯ ದೆಹಲಿಗೆ ದೊಭಾಲ್ ಅವರು ಕಳೆದ 48 ಗಂಟೆಗಳಲ್ಲಿ ಎರಡು ಬಾರಿ ಭೇಟಿ ನೀಡಿದ್ದರು.

ದೆಹಲಿಯಲ್ಲಿರುವ 203 ಪೊಲೀಸ್ ಠಾಣೆಗಳ ಪೈಕಿ 12 ಪೊಲೀಸ್ ಠಾಣೆಗಳು, ಒಟ್ಟ ಭೂಪ್ರದೇಶದಲ್ಲಿ ಶೇ 4.2ರಷ್ಟು ಪ್ರದೇಶದಲ್ಲಿಮಾತ್ರ ಹಿಂಸಾಚಾರ ಕಾಣಿಸಿಕೊಂಡಿದೆ. ಕಳೆದ 36 ಗಂಟೆಗಳಲ್ಲಿ ಗಮನಾರ್ಹ ಹಿಂಸಾಚಾರ ವರದಿಯಾಗಿಲ್ಲ ಎಂದು ಹೇಳಿಕೆ ತಿಳಿಸಿದೆ.

‘ನಾಗರಿಕರು ಗಾಳಿಸುದ್ದಿ ನಂಬಬಾರದು. ದುಷ್ಟರ ಕೈಗೆ ದಾಳವಾಗಬಾರದು’ ಎಂದು ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ‘ಶಾಂತಿ ಸಮಿತಿಗಳ ಮೂಲಕ ವಿಶ್ವಾಸವೃದ್ಧಿ ಪ್ರಯತ್ನಗಳು ಆರಂಭವಾಗಿವೆ’ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

‘ಬೀದಿಗಳನ್ನು ಸ್ವಚ್ಛಗೊಳಿಸುವ, ಹಾನಿಗೊಳಗಾಗಿರುವಸಾರ್ವಜನಿಕ ಆಸ್ತಿಪಾಸ್ತಿಗಳನ್ನು ರಿಪೇರಿ ಮಾಡುವ ಕೆಲಸ ಆರಂಭವಾಗಿದೆ. ಇತರ ರಾಜ್ಯಗಳಿಂದ ದೆಹಲಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ’ ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.