ತಿರುಪತಿ: ಪ್ರಸಿದ್ಧ ವೆಂಕಟೇಶ್ವರ ದೇಗುಲದ ಕೆಲವು ಅರ್ಚಕರೂ ಸೇರಿದಂತೆ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)ನ 743 ಮಂದಿ ಸಿಬ್ಬಂದಿ ಇದುವರೆಗೆ ಕೊರೊನಾ ಸೋಂಕಿತರಾಗಿದ್ದಾರೆ. ಜೂನ್ 11ರಿಂದ ಈಚೆಗೆ ಇವರಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ.
ಸೋಂಕಿತರಲ್ಲಿ 402 ಮಂದಿ ಗುಣಮುಖರಾಗಿದ್ದಾರೆ. 338 ಮಂದಿ ವಿವಿಧ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಭಾನುವಾರ ತಿಳಿಸಿದ್ದಾರೆ.
ಲಾಕ್ಡೌನ್, ನಿರ್ಬಂಧ ಮತ್ತಿತರ ಕಾರಣಗಳಿಂದ ಎರಡೂವರೆ ತಿಂಗಳ ಕಾಲ ಮುಚ್ಚಿದ್ದ ತಿರುಪತಿಯ ವೆಂಕಟೇಶ್ವರ ದೇಗುಲ ಮತ್ತು ತಿರುಮಲ ದೇವಾಲಯಗಳನ್ನು ಜೂನ್ 11 ರಿಂದ ಭಕ್ತರಿಗೆ ಮುಕ್ತಗೊಳಿಸಲಾಗಿದೆ.
ಟಿಟಿಡಿ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದೇಗುಲದ ಬಾಗಿಲು ತೆರೆಯಲಾಗಿತ್ತು ಎಂದು ಕೆಲ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಅವರು ಅಲ್ಲಗಳೆದರು. ಭಕ್ತರ ಕೋರಿಕೆ ಪರಿಗಣಿಸಿ ದೇಗುಲ ತೆರೆಯಲಾಗಿದೆ. ಕೋವಿಡ್–19 ಕಾರಣ ವಿಧಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಸಿಂಘಾಲ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.