ಪ್ರಾತಿನಿಧಿಕ ಚಿತ್ರ
ಲಖನೌ: ‘ಉತ್ತರ ಪ್ರದೇಶದ ಜೈಲುಗಳು ಕೈದಿಗಳಿಂದ ತುಂಬಿ ತುಳುಕುತ್ತಿದ್ದು, ಸಾಮರ್ಥ್ಯ ಮೀರಿ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದು ಜೈಲು ಆಡಳಿತ ಹಾಗೂ ಸುಧಾರಣಾ ಇಲಾಖೆ ಸಚಿವ ದಾರಾ ಸಿಂಗ್ ಚವ್ಹಾಣ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಏಳನೇ ದಿನ ಪ್ರಶ್ನೋತ್ತರದಲ್ಲಿ ಪಾಲ್ಗೊಂಡ ಅವರು, ಸಮಾಜವಾದಿ ಪಕ್ಷದ ಶಾಸಕ ರಾಜೇಂದ್ರ ಪ್ರಸಾದ್ ಚೌಧರಿ ಅವರ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯದಲ್ಲಿರುವ 76 ಜೈಲುಗಳ ಸಾಮರ್ಥ್ಯ 76,475. ಆದರೆ ಸದ್ಯ 89,256 ಕೈದಿಗಳು ಇದ್ದಾರೆ’ ಎಂದಿದ್ದಾರೆ.
‘ಜ. 31ರವರೆಗೂ ಉತ್ತರ ಪ್ರದೇಶದಲ್ಲಿ ಒಟ್ಟು 76 ಜೈಲುಗಳಿವೆ. ಎಂಟು ಹೊಸ ಜೈಲುಗಳು ನಿರ್ಮಾಣ ಹಂತದಲ್ಲಿವೆ. ಇದರಿಂದ ಹೆಚ್ಚುವರಿಯಾಗಿ 9,165 ಕೈದಿಗಳನ್ನು ಇಡಬಹುದಾಗಿದೆ. 15 ಜಿಲ್ಲೆಗಳಲ್ಲಿ 16 ಹೊಸ ಜೈಲುಗಳನ್ನು ಭವಿಷ್ಯದಲ್ಲಿ ನಿರ್ಮಿಸುವ ಯೋಜನೆ ಇದ್ದು, ಇದರಲ್ಲಿ 21,408 ಕೈದಿಗಳನ್ನು ಇಡಬಹುದಾಗಿದೆ’ ಎಂದಿದ್ದಾರೆ.
‘ಇವುಗಳ ಜತೆಗೆ ಹಾಲಿ ಇರುವ ಜೈಲುಗಳಲ್ಲಿ ಬ್ಯಾರಕ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಇದರಿಂದ ಹೆಚ್ಚುವರಿ ಕೈದಿಗಳನ್ನು ಇಡಲು ಸಾಧ್ಯವಾಗಲಿದೆ’ ಎಂದು ಸಚಿವ ಚವ್ಹಾಣ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.