ADVERTISEMENT

ಉತ್ತರ ಪ್ರದೇಶ: ಯೋಗಿ ಸಂಪುಟದಲ್ಲಿ 9 ಜನ ದಲಿತರು, 20 ಮಂದಿ ಹಿಂದುಳಿದವರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 6:23 IST
Last Updated 26 ಮಾರ್ಚ್ 2022, 6:23 IST
ಯೋಗಿ ಆದಿತ್ಯನಾಥ –ಪಿಟಿಐ ಚಿತ್ರ
ಯೋಗಿ ಆದಿತ್ಯನಾಥ –ಪಿಟಿಐ ಚಿತ್ರ   

ಲಖನೌ: ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿಯೋಗಿ ಆದಿತ್ಯನಾಥ ಅಧಿಕಾರ ಸ್ವೀಕರಿಸಿದ್ದು, ಸಂಪುಟದಲ್ಲಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಿದ್ದಾರೆ.

2024ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ,ಯೋಗಿ ಸಂಪುಟದಲ್ಲಿ ಬ್ರಾಹ್ಮಣರು, ಜಾಟರು, ಪರಿಶಿಷ್ಟ ಜಾತಿಗಳು, ಇತರೆ ಹಿಂದುಳಿದ ವರ್ಗಗಳಿಗೆ ಸಿಂಹಪಾಲು ಪ್ರಾತಿನಿಧ್ಯ ನೀಡಲಾಗಿದೆ.

ಮುಸ್ಲಿಮರು ಮತ್ತು ಪಂಜಾಬಿ ಸಮುದಾಯದವರಿಗೂ ಸಚಿವ ಸ್ಥಾನ ನೀಡುವ ಮೂಲಕ ಮುಂದಿನ ಚುನಾವಣೆ ವೇಳೆಗೆ ಜಾತಿ ಮತ್ತು ಧರ್ಮಗಳ ಸಮೀಕರಣಕ್ಕೆ ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ವಿಧಾನಸಭಾ ಚುನಾವಣೆಗೂ ಮುನ್ನ ಈ ಸಮುದಾಯದ ನಾಯಕರು ಬಿಜೆಪಿಯಿಂದ ದೂರ ಸರಿದಿದ್ದರು. ಇವರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಮೂಲಕ ಈ ಸಮುದಾಯಗಳನ್ನು ಸಮಾಧಾನಪಡಿಸಲು ಬಿಜೆಪಿ ಮುಂದಾಗಿದೆ.

9 ಜನ ದಲಿತರು, 20 ಜನ ಹಿಂದುಳಿದ ವರ್ಗದವರು ಸೇರಿದಂತೆ ಮುಸ್ಲಿಂ ಹಾಗೂ ಪಂಜಾಬಿ ಸಮುದಾಯದ ತಲಾ ಒಬ್ಬರು ಯೋಗಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಈ ಹಿಂದಿನ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಬ್ರಾಹ್ಮಣ ಸಮುದಾಯದ ಬ್ರಜೇಶ್ ಪಾಠಕ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಹಿಂದುಳಿದ ವರ್ಗಗಳ ಕೇಶವ ಪ್ರಸಾದ್ ಮೌರ್ಯ ಅವರು ಚುನಾವಣೆಯಲ್ಲಿ ಸೋತರೂ, ಅದೇ ಹುದ್ದೆಯಲ್ಲಿ ಅವರನ್ನು ಮುಂದುವರೆಸಲಾಗಿದೆ.

ಈ ಎಲ್ಲಾ ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ, 2024ರ ಲೋಕಸಭಾ ಚುನಾವಣೆವರೆಗೂ ಈ ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.