ಪಟ್ನಾ: ಖಾಸಗಿ ಶಾಲೆಯ ಶಿಕ್ಷಕನ ಅಮಾನುಷ ಹಲ್ಲೆಯಿಂದಾಗಿ ಏಳು ವರ್ಷದ ಬಾಲಕನೊಬ್ಬ ಶುಕ್ರವಾರ ಮೃತಪಟ್ಟಿರುವ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಆದಿತ್ಯ ಕುಮಾರ್(7) ಎಂದು ಗುರುತಿಸಲಾಗಿದೆ. ಸಹರ್ಸಾ ಜಿಲ್ಲೆಯ ಹಳ್ಳಿಯೊಂದರ ಖಾಸಗಿಯಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಯಾಗಿದ್ದ ಬಾಲಕ, ಕಳೆದ 10 ದಿನಗಳಿಂದ ಹಾಸ್ಟೆಲ್ನಲ್ಲಿ ವಾಸವಾಗಿದ್ದನು. ಪೋಷಕರು ಪಕ್ಕದ ಮಾಧೇಪುರ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮಾರ್ಚ್ 14ರಂದು ನಮ್ಮ ಮಗುವನ್ನು ಸಹರ್ಸಾ ಜಿಲ್ಲೆಯ ಸ್ಕೂಲ್ ಕಮ್ ಹಾಸ್ಟೆಲ್ಗೆ ಕಳುಹಿಸಿದ್ದೇವೆ. ಶುಕ್ರವಾರ ಶಾಲೆಯ ಆಡಳಿತದಿಂದ ನಮಗೆ ಫೋನ್ ಕರೆ ಬಂದಿತು. ಆದಿತ್ಯ ಪ್ರಜ್ಞಾಹೀನರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದರು. ನಾವು ಆಸ್ಪತ್ರೆ ತಲುಪುವ ವೇಳೆಗೆ ಮೃತಪಟ್ಟಿದ್ದಾನೆ’ ಎಂದು ಬಾಲಕನ ತಂದೆ ಪ್ರಕಾಶ್ ಹೇಳಿದ್ದಾರೆ.
‘ಸಾವಿಗೆ ನಿಜವಾದ ಕಾರಣವನ್ನು ತಿಳಿಯಲು ನಾವು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ದೈಹಿಕ ಹಲ್ಲೆಯಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಶಾಲೆಯ ಮಾಲೀಕರನ್ನೂ ಬಂಧಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅವರು ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸುತ್ತೇವೆ’ ಎಂದು ಸದರ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬ್ರಜೇಶ್ ಚೌಹಾಣ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.