ADVERTISEMENT

ಅಗ್ನಿಪಥ ನೇಮಕಾತಿ ವೇಳೆ ಜಾತಿ ಕೇಳುತ್ತಿರುವ ಆರೋಪ: ವದಂತಿ ಎಂದ ರಾಜನಾಥ್ ಸಿಂಗ್

ಪಿಟಿಐ
Published 19 ಜುಲೈ 2022, 10:44 IST
Last Updated 19 ಜುಲೈ 2022, 10:44 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ಅಗ್ನಿಪಥ ಯೋಜನೆಯಡಿ ಯುವಕರನ್ನು ನೇಮಿಸಿಕೊಳ್ಳುತ್ತಿರುವ ಭಾರತೀಯ ಸೇನೆಯು ಜಾತಿಯನ್ನು ಒಂದು ಅಂಶವಾಗಿ ಬಳಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಮಂಗಳವಾರ ಆರೋಪಿಸಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಎಪಿ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಇದು ಕೇವಲ ವಂದತಿ ಎಂದು ಹೇಳಿದ್ದಾರೆ.

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸೇನಾ ನೇಮಕಾತಿ ವೇಳೆ ಅಭ್ಯರ್ಥಿಗಳಿಗೆ ತಮ್ಮ ಜಾತಿಯನ್ನು ನಮೂದಿಸಲು ಕೇಳಲಾಗುತ್ತಿದೆ ಎಂದು ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಟ್ವೀಟ್ ಮೂಲಕ ಆರೋಪ ಮಾಡಿದ್ದರು. ದಲಿತರು, ಹಿಂದುಳಿದ ವರ್ಗದವರು ಮತ್ತು ಆದಿವಾಸಿಗಳಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ನೀವು ಅವಕಾಶ ನೀಡುವುದಿಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದರು.

‘ಮೋದಿ ಸರ್ಕಾರದ ಕೀಳು ಮನಸ್ಥಿತಿ ದೇಶದ ಜನರ ಮುಂದೆ ಬಂದಿದೆ’ ಎಂದು ಹಿಂದಿಯಲ್ಲಿ ಮಾಡಲಾಗಿರುವ ಟ್ವೀಟ್‌ನಲ್ಲಿ ಕಿಡಿ ಕಾರಿದ್ದರು.

ADVERTISEMENT

ಟ್ವೀಟ್‌ನಲ್ಲಿ ಏನಿದೆ?: ‘ಮೋದಿ ಜೀ.. ಅರ್ಹ ದಲಿತ/ಹಿಂದುಳಿದ/ಆದಿವಾಸಿ ಸಮುದಾಯಗಳ ಅಭ್ಯರ್ಥಿಗಳನ್ನು ಸೇನಾ ನೇಮಕಾತಿಗೆ ಪರಿಗಣಿಸುವುದಿಲ್ಲವೇ? ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸೇನಾ ನೇಮಕಾತಿಯಲ್ಲಿ ಜಾತಿಯನ್ನು ಕೇಳಲಾಗುತ್ತಿದೆ. ಮೋದಿ ಜೀ, ನೀವು ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲು ಹೊರಟಿದ್ದೀರೋ ಅಥವಾ ಜಾತಿವೀರರನ್ನೋ?’ ಎಂದು ಪ್ರಶ್ನಿಸಿದ್ದರು.

ಕೇವಲ ವದಂತಿ: ಈ ಬಗ್ಗೆ ಸಂಸತ್ ಆವರಣದಲ್ಲಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದೊಂದು ವದಂತಿ ಎಂಬುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಸ್ವಾತಂತ್ರ್ಯಪೂರ್ವದಿಂದಲೂ ಇರುವಾಗ ನೇಮಕಾತಿ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.