ADVERTISEMENT

ಖಾಲಿಸ್ತಾನ ಪರ ಟ್ವೀಟ್ ಮಾಡಿದ ನಾಯಕನನ್ನು ಪಕ್ಷದಿಂದ ಉಚ್ಚಾಟಿಸಿದ ಎಎಪಿ

ಪಿಟಿಐ
Published 2 ಮೇ 2022, 16:28 IST
Last Updated 2 ಮೇ 2022, 16:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಮ್ಲಾ: ‘ಖಾಲಿಸ್ತಾನ ಪರ’ ಟ್ವೀಟ್ ಮಾಡಿದ ಆರೋಪದಲ್ಲಿ ಪಕ್ಷದ ಹಿಮಾಚಲ ಪ್ರದೇಶ ಘಟಕದ ಸಾಮಾಜಿಕ ಮಾಧ್ಯಮ ಉಸ್ತುವಾರಿ ಹರ್‌ಪ್ರೀತ್ ಸಿಂಗ್ ಬೇಡಿ ಅವರನ್ನು ಆಮ್ ಆದ್ಮಿ ಪಕ್ಷವು (ಎಎಪಿ) ಉಚ್ಚಾಟನೆ ಮಾಡಿದೆ.

ಬೇಡಿ ಬಹಿರಂಗವಾಗಿ ಖಾಲಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಖಾಲಿಸ್ತಾನವನ್ನು ಬೆಂಬಲಿಸಿ ಸರಣಿ ಟ್ವೀಟ್‌ ಮಾಡಿದ್ದಾರೆ ಎಂದು ಭಾನುವಾರ ಬಿಜೆಪಿ ಆರೋಪಿಸಿತ್ತು.

‘ಹರ್‌ಪ್ರೀತ್ ಸಿಂಗ್ ಬೇಡಿ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ವಿಚಾರಗಳು ಆಮ್‌ ಆದ್ಮಿ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಯಾವುದೇ ರೀತಿಯಲ್ಲಿಯೂ ಪಕ್ಷದ ಅಭಿಪ್ರಾಯವನ್ನು ಪ್ರತಿಧ್ವನಿಸುವುದಿಲ್ಲ’ ಎಂದು ಎಎಪಿ ಟ್ವೀಟ್‌ ಮಾಡಿದೆ.

‘ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು (ಹರ್‌ಪ್ರೀತ್ ಸಿಂಗ್ ಬೇಡಿ) ಎಲ್ಲ ಹುದ್ದೆಗಳಿಂದ ವಜಾಗೊಳಿಸಲಾಗಿದೆ’ ಎಂದು ಎಎಪಿ ಉಲ್ಲೇಖಿಸಿದೆ.

‘ಎಎಪಿಯು ನಮ್ಮ ದೇಶದ ಏಕತೆ, ಸಮಗ್ರತೆಯಲ್ಲಿ ನಂಬಿಕೆ ಇರಿಸಿದೆ. ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಯಾರು ಏನೇ ಬರೆದರೂ ಸಹಿಸುವುದಿಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ಬೇಡಿ ಅವರು 2012ರಿಂದ 2020ರ ಅವಧಿಯಲ್ಲಿ ಭಾರತ ವಿರೋಧಿ ಮತ್ತು ಖಾಲಿಸ್ತಾನ ಪರವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.