ADVERTISEMENT

‘ಇಂಡಿಯಾ’ ಲೋಕಸಭೆಗೆ ಮಾತ್ರ ಸೀಮಿತವಾಗಿತ್ತು: ಕೇಜ್ರಿವಾಲ್‌

ಪಿಟಿಐ
Published 3 ಜುಲೈ 2025, 11:08 IST
Last Updated 3 ಜುಲೈ 2025, 11:08 IST
ಅರವಿಂದ್‌ ಕೇಜ್ರಿವಾಲ್‌–ಪಿಟಿಐ ಚಿತ್ರ
ಅರವಿಂದ್‌ ಕೇಜ್ರಿವಾಲ್‌–ಪಿಟಿಐ ಚಿತ್ರ   

ಅಹಮದಾಬಾದ್: ‘ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಗಾಗಿ ಮಾತ್ರವೇ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಲಾಗಿತ್ತು. ಕಾಂಗ್ರೆಸ್‌ನೊಂದಿಗೆ ನಮ್ಮ ಪಕ್ಷ ಯಾವುದೇ ಮೈತ್ರಿ ಹೊಂದಿಲ್ಲ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. 

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್‌ ಸಹಾಯ ಮಾಡುತ್ತಿದೆ. ಎಎಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಯಾವುದೇ ಮೈತ್ರಿ ಇಲ್ಲ. ಜುನಾಗಢ ಜಿಲ್ಲೆಯ ವಿಸಾವದರ್‌ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಏಕೆ ನಮ್ಮ ವಿರುದ್ಧ ಸ್ಪರ್ಧಿಸಿತು? ನಮ್ಮನ್ನು ಸೋಲಿಸಲು ಅದು ಹೀಗೆ ಮಾಡಿದೆ. ನಮ್ಮ ಮತಗಳನ್ನು ಒಡೆಯಲು ಬಿಜೆಪಿಯೇ ಕಾಂಗ್ರೆಸ್ ಅನ್ನು ಚುನಾವಣೆಗೆ ಕಳುಹಿಸಿತ್ತು’ ಎಂದು ದೂರಿದರು.

‘ಎಎಪಿ ಗೆಲುವು ಸಾಧಿಸಿತು. ಸೋತ ಕಾಂಗ್ರೆಸ್‌ಗೆ ಬಿಜೆಪಿ ಛೀಮಾರಿ ಹಾಕಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ಉದ್ದೇಶವನ್ನು ಮಾತ್ರ ಹೊಂದಿತ್ತು. ಈಗ ಯಾವ ಮೈತ್ರಿಯೂ ಇಲ್ಲ. ಗುಜರಾತ್‌ನಲ್ಲಿ 30 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ, ರಾಜ್ಯವನ್ನು ಹಾಳು ಮಾಡಿದೆ. ವಿಪಕ್ಷವಾಗಿ ಕಾಂಗ್ರೆಸ್‌ ಕೂಡ ವಿಫಲವಾಗಿದೆ’ ಎಂದು ಟೀಕಿಸಿದರು. 

ADVERTISEMENT

‘ಇಂದಿನಿಂದ ‘ಗುಜರಾತ್‌ ಜೋಡೊ ಅಭಿಯಾನ’ವನ್ನು ಪಕ್ಷವು ಹಮ್ಮಿಕೊಂಡಿದೆ. ನಮ್ಮ ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡುವ ಮೂಲಕ ಜನರು ಎಎಪಿಯನ್ನು ಸೇರಬಹುದು. ನಮ್ಮ ಕಾರ್ಯಕರ್ತರೂ ಎಲ್ಲಾ ಮನೆಗಳಿಗೆ ತೆರಳಲಿದ್ದಾರೆ. ಎಎಪಿಯು ಯುವಜನರ ಪಕ್ಷ. ಭ್ರಷ್ಟಾಚಾರ ರಹಿತ ಗುಜರಾತ್‌ಗಾಗಿ ನಮ್ಮ ಪಕ್ಷದೊಂದಿಗೆ ಕೈ ಜೋಡಿಸಿ ಎಂದು ಯುವಜನರಲ್ಲಿ ಮನವಿ ಮಾಡುತ್ತೇನೆ’ ಎಂದು ಕೇಜ್ರಿವಾಲ್‌ ಹೇಳಿದರು.

ಎಎಪಿಯು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಲಿಷ್ಠ ಪರ್ಯಾಯವಾಗಿ ಹೊರಹೊಮ್ಮಿದೆ. ಜನರು ನಮ್ಮನ್ನು ನಂಬಿದ್ದಾರೆ. 2027ರ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ.
ಅರವಿಂದ ಕೇಜ್ರಿವಾಲ್‌, ಎಎಪಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.