ADVERTISEMENT

ನ.4 ಗುಜರಾತ್ ಸಿ.ಎಂ ಅಭ್ಯರ್ಥಿ ಘೋಷಣೆ: ಕೇಜ್ರಿವಾಲ್

ಅಭ್ಯರ್ಥಿ ನಿರ್ಧರಿಸಲು ಜನಾಭಿಪ್ರಾಯಕ್ಕೆ ಮುಂದಾದ ಆಪ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 11:46 IST
Last Updated 29 ಅಕ್ಟೋಬರ್ 2022, 11:46 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್   

ಸೂರತ್ (ಪಿಟಿಐ):ಜನಾಭಿಪ್ರಾಯ ಆಧರಿಸಿ ಮುಂಬರುವ ಗುಜರಾತ್‌ ವಿಧಾನಸಭೆ ಚುನಾವಣೆಗೆ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ನ.4ರಂದು ಪ್ರಕಟಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ತಿಳಿಸಿದರು.

ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡಲು ಮತದಾರರು ಎಸ್‌ಎಂಎಸ್‌, ವಾಟ್ಸ್‌ಆ್ಯಪ್, ವಾಯ್ಸ್ ಮೇಲ್, ಇ ಮೇಲ್‌ ಮೂಲಕ ಪಕ್ಷವನ್ನು ಸಂಪರ್ಕಿಸಬೇಕು.ಗುಜರಾತ್‌ನಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ರಾಜ್ಯದಲ್ಲಿ ಎಎಪಿ ಸರ್ಕಾರ ರಚಿಸಲಿದೆ ಎಂದು ಜನರು ನಂಬಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಗುಜರಾತ್ ಜನತೆಯೇ ಹೇಳಬೇಕೆಂದು ನಾನು ಬಯಸುತ್ತೇನೆ. ನಾವು ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿ ನೀಡಿದ್ದೇವೆ. ನ.3ರ ಸಂಜೆ 5ರ ಒಳಗಾಗಿ ಜನ ತಮ್ಮ ಅಭಿಪ್ರಾಯ ತಿಳಿಸಬಹುದು.ಸಾರ್ವಜನಿಕರು 6357000360 ಕರೆ ಮಾಡಿ, ಸಂದೇಶ, ಧ್ವನಿ ಸಂದೇಶ ಕಳುಹಿಸಿ, ವಾಟ್ಸ್‌ಆ್ಯಪ್‌ ಮಾಡಿ ತಮ್ಮ ಆಯ್ಕೆ ತಿಳಿಸಬಹುದು. ಅದಲ್ಲದೇ aapnocm@gmail.comಗೆ ಇಮೇಲ್ ಮಾಡಿಯೂ ತಮ್ಮ ಆಯ್ಕೆಯನ್ನು ತಿಳಿಸಬಹುದು’ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ADVERTISEMENT

ವಿಜಯ್ ರೂಪಾನಿ ಬದಲಿಗೆ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದಕ್ಕೆ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ ಕೇಜ್ರಿವಾಲ್, ರಾಜ್ಯದ ಜನರನ್ನು ಕೇಳದೆ ನಿರ್ಧರಿಸಲಾಗಿದೆ ಎಂದರು.

ಪಂಜಾಬ್‌ ಚುನಾವಣೆಯಲ್ಲೂ ಸಿ.ಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಜನರ ತೀರ್ಮಾನಕ್ಕೆ ಬಿಡಲಾಗಿತ್ತು. ಮತದಾರರು ಭಗವಂತ್‌ ಮಾನ್ ಅವರಿಗೆ ‌ಅಭೂತಪೂರ್ವ ಬೆಂಬಲ ನೀಡಿದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.