ADVERTISEMENT

ಲಕ್ಷದ್ವೀಪ ಕುರಿತ ಕೇಂದ್ರದ ಕಾಯ್ದೆ ವಿರುದ್ಧ ಕಾನೂನು ನೆರವು: ಸಂಸದ ಮೊಹಮ್ಮದ್

ಪಿಟಿಐ
Published 31 ಮೇ 2021, 11:40 IST
Last Updated 31 ಮೇ 2021, 11:40 IST
ಲಕ್ಷದ್ವೀಪ (ಸಂಗ್ರಹ ಚಿತ್ರ)
ಲಕ್ಷದ್ವೀಪ (ಸಂಗ್ರಹ ಚಿತ್ರ)   

ನವದೆಹಲಿ: ಲಕ್ಷದ್ವೀಪದ ಆಡಳಿತಾಧಿಕಾರಿಯು ಕಳೆದ ಐದು ತಿಂಗಳಲ್ಲಿ 15–20 ದಿನವಷ್ಟೇ ಅಲ್ಲಿಗೆ ಭೇಟಿ ನೀಡಿದ್ದು, ಸ್ಥಳೀಯ ಪರಿಸರ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಯಾವುದೇ ರೀತಿಯಲ್ಲಿ ಯತ್ನಿಸಿಲ್ಲ ಎಂದು ಲಕ್ಷದ್ವೀಪದ ಸಂಸದ ಮೊಹಮ್ಮದ್‌ ಫೈಜಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದ್ವೀಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತರಲು ಉದ್ದೇಶಿಸಿರುವ ವಿವಾದಿತ ಕಾಯ್ದೆ ಜಾರಿ ವಿರುದ್ಧಕಾನೂನು ನೆರವು ಪಡೆಯುವ ಚಿಂತನೆಯೂ ಇದೆ ಎಂದು ಅವರು ತಿಳಿಸಿದರು.

ಆಡಳಿತಾಧಿಕಾರಿ ಸ್ಥಾನದಿಂದ ಪ್ರಫುಲ್ ಪಟೇಲ್‌ ಅವರನ್ನು ವಾಪಸು ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿರುವ ಎನ್‌ಸಿಪಿ ಮುಖಂಡರೂ ಆದ ಫೈಜಲ್, ಕರಡು ಮಸೂದೆಗಳಿಗೆ ಲಕ್ಷದ್ವೀಪದಲ್ಲಿ ಎಲ್ಲ ಕ್ಷೇತ್ರಗಳಿಂದ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಬಿಜೆಪಿ ಮುಖಂಡರೂ ಅದರ ವಿರುದ್ಧ ಇದ್ದಾರೆ ಎಂದು ಪ್ರತಿಪಾದಿಸಿದರು.

ADVERTISEMENT

ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಲಕ್ಷದ್ವೀಪ ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರ (ಎಲ್‌ಡಿಎಆರ್‌) ಮತ್ತು ಲಕ್ಷದ್ವೀಪ ಸಮಾಜವಿರೋಧಿ ಚಟುವಟಿಕೆ ನಿಯಂತ್ರಣ ಕಾಯ್ದೆ (ಎಲ್‌ಪಿಎಎಸ್‌ಎಆರ್‌) ಕುರಿತಂತೆ ಸ್ಥಳೀಯವಾಗಿ ನಿವಾಸಿಗಳಲ್ಲಿ ಆತಂಕ ವ್ಯಕ್ತವಾಗಿದೆ ಎಂದು ಫೈಜಲ್‌ ಅಭಿಪ್ರಾಯಪಟ್ಟರು.

ಸ್ಥಳೀಯರು ಮತ್ತು ಮುಖಂಡರ ಅಭಿಪ್ರಾಯವನ್ನು ಪಡೆಯದೇ ಪಟೇಲ್‌ ಅವರು ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು. ದಿನೇಶ್ವರ ಶರ್ಮಾ ಅವರ ನಿಧನದ ನಂತರ ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಪಟೇಲ್‌ ಅವರಿಗೆ ಆಡಳಿತಾಧಿಕಾರಿ ಜವಾಬ್ದಾರಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.