ನವದೆಹಲಿ: ‘ಗಡಿಯ ಸಾರ್ವಭೌಮತ್ವ ರಕ್ಷಣೆಯ ಜೊತೆಗೆ ಗಡಿವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಭಾರತ ಬಯಸಲಿದೆ. ನಿಯಮ ಆಧಾರಿತ ಅಂತರರಾಷ್ಟ್ರೀಯ ಗಡಿಯನ್ನು ಕಾಯ್ದುಕೊಳ್ಳಲು ಭಾರತ ಬದ್ಧವಾಗಿದೆ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಟೋಕಿಯೊದಲ್ಲಿ ಮಂಗಳವಾರ ನಡೆದ ‘ಕ್ವಾಡ್’ ರಾಷ್ಟ್ರಗಳ ಸಚಿವರ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ,ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮೇರಿಸ್ ಪೈನ್ ಹಾಗೂ ಜಪಾನ್ನ ಟೊಶಿಮಿಸು ಮೊಟೆಗಿ ಸಭೆಯಲ್ಲಿ ಭಾಗವಹಿಸಿದ್ದರು.
ಪೂರ್ವ ಲಡಾಖ್ನಲ್ಲಿ ಗಡಿ ಅತಿಕ್ರಮಣ ಮಾಡುವ ಚೀನಾ ಸೇನೆಯ ಯತ್ನಕ್ಕೆ ಭಾರತೀಯ ಯೋಧರು ಪ್ರತಿರೋಧ ವ್ಯಕ್ತಪಡಿಸಿರುವ ಪರಿಸ್ಥಿತಿ ನಡುವೆಯೇ ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಐದು ತಿಂಗಳ ಅವಧಿಯ ಅನಿಶ್ಚಿತತೆಗೆ ತೆರೆಎಳೆಯಲು ಭಾರತ ಒತ್ತು ನೀಡಿರುವ ಕಾರಣ, ಕೋವಿಡ್ ಕುರಿತಂತೆ ಚೀನಾ ಮೇಲೆ ದೋಷಾರೋಪ ಮಾಡುವಲ್ಲಿ ಅಮೆರಿಕ ಹೇಳಿಕೆ ಬೆಂಬಲಿಸುವ ಅಥವಾ ಚೀನಾ ವಿರುದ್ಧ ಕಟು ಮಾತುಗಳನ್ನು ಬಳಸದಂತೆಯೂ ಅವರು ಎಚ್ಚರ ವಹಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಸಭೆಯಲ್ಲಿ ಇದ್ದ ಇತರೇ ದೇಶಗಳ ಸಚಿವರು, ಪ್ರತಿನಿಧಿಗಳ ಜೊತೆಗೆ ದ್ವಿಪಕ್ಷೀಯ ಮಾತುಕತೆಯಲ್ಲಿಯೂ ಪಾಲ್ಗೊಂಡಿದ್ದರು. ಇಂಡೊ–ಫೆಸಿಪಿಕ್ ವಲಯದಲ್ಲಿ ಆದಿಪತ್ಯವನ್ನು ತಡೆಯುವ ನಿಟ್ಟಿನಲ್ಲಿ ನಾಲ್ಕು ದೇಶಗಳು 2017 ಕ್ವಾಡ್ ಶೃಂಗವನ್ನು ರಚಿಸಿಕೊಂಡಿದ್ದವು. ಈ ಹಿಂದೆ ಸೆಪ್ಟೆಂಬರ್ 2019ಲ್ಲಿ ನ್ಯೂಯಾರ್ಕ್ನಲ್ಲಿ ನಾಲ್ಕು ರಾಷ್ಟ್ರಗಳ ಸಚಿವ ಮಟ್ಟದ ಮಾತುಕತೆ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.