ಆಗಸ್ಟ್ ಬಳಿಕ ನೀವೇನಾದರೂ ಕೇರಳದ ಮುನ್ನಾರ್ ಸಮೀಪದ ಆನಮಲೈ ಬೆಟ್ಟಕ್ಕೆ ಹೋದರೆ, ಪ್ರಕೃತಿಯ ಕೌತಕವೊಂದನ್ನು ಕಾಣುವಿರಿ. ಅಲ್ಲಿ ಬೆಟ್ಟದ ಬಯಲೆಲ್ಲ ಕಡುನೀಲಿಯಾಗಿರುತ್ತೆ. ಬಾನಿಗೆ ಬಣ್ಣಕ್ಕೆ ಪೈಪೋಟಿ ನೀಡುವಂತೆ ನೆಲವೇ ನೀಲಿ ಬಣ್ಣಕ್ಕೆ ತಿರುಗಿರುತ್ತೆ. ಬಣ್ಣ–ಬಣ್ಣದ ಪಾತರಗಿತ್ತಿಯರಹಿಂಡು ಅಲ್ಲಿ ವಿಹಾರ ಮಾಡುತ್ತಿರುತ್ತೆ. ಆ ನೋಟ ನೋಡುವಾಗ ನಿಮಗೆ ಸ್ವರ್ಗಸುಖ ಅನುಭವವಾಗುತ್ತೆ.
ಆ ಬೆಟ್ಟದ ಸಾಲುಗಳಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂಗಳು ಅರಳುತ್ತಿವೆ. 2006ರಲ್ಲಿ ಜರುಗಿದ್ದ ಈ ಪ್ರಕೃತಿ ವಿಸ್ಮಯ ಮತ್ತೆ ಮರಳಿದೆ. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕೆಲವು ಪ್ರವಾಸಿಗರು ತುದಿಗಾಲಲ್ಲಿ ನಿಂತಿದ್ದಾರೆ.
ಮುನ್ನಾರ್ ಸಮೀಪದ ಬೆಟ್ಟಗಳು ಹಲವು ಅಪರೂಪದ ನೈಸರ್ಗಿಕ ಕೌತುಕದ ತವರು.ಈ ಬೆಟ್ಟಸಾಲುಗಳಲ್ಲಿ ನೀಲಕುರಂಜಿ ಪೊದೆಗಳು 3 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ವ್ಯಾಪಿಸಿವೆ. ಪೊದೆಯಾಗಿ ಬೆಳೆಯುವ ಕುರಿಂಜಿ ಸಸಿಗಳು ಜೀವಿತಾವಧಿಯಲ್ಲಿ ಒಂದು ಬಾರಿ ಹೂಬಿಟ್ಟ, ಬಳಿಕ ಒಣಗಿ ಹೋಗುತ್ತವೆ. ಸತ್ತ ಸಸಿಗಳಿಂದ ಉದುರಿದ ಬೀಜಗಳು 30ರಿಂದ 60 ಸೆಂ.ಮೀ. ಬೆಳೆದು, ಕಣ್ಮನ ಸೆಳೆಯುವ ಹೂ ಬಿಡುತ್ತವೆ. ಅದಕ್ಕೆ ಬರೋಬ್ಬರಿ 12 ವಸಂತಗಳನ್ನು ತೆಗೆದುಕೊಳ್ಳುತ್ತವೆ. ಈ ಸುರೂಪದ ಹೂಗಳ ಸೌಂದರ್ಯವನ್ನು ಕಣ್ಗಳಿಂದ ಸವಿಯಲು ಬನ್ನಿರಂದು ಕೇರಳದ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಕೈಬೀಸಿ ಕರೆಯಲು ಶುರು ಮಾಡಿದೆ.
ಯಾರಿವಳುನೀಲಕುರಿಂಜಿ?
*ಭೂಮಧ್ಯರೇಖೆಯ ಸಮೀಪದ ಖಂಡಗಳಲ್ಲಿ ಬೆಳೆಯುವ ವಿಶೇಷ ಸಸಿ
* ಏಷಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಬೆಳೆಯುವ ಹೂ ಪೊದೆ
*Strobilanthes ಜಾತಿಗೆ ಸೇರಿದ ಸಸ್ಯ
* ಇದರಲ್ಲಿಯೇ 450 ಪ್ರಭೇದಗಳಿವೆ. ಅವುಗಳಲ್ಲಿ 146 ಭಾರತದಲ್ಲಿ ಬೆಳೆಯುತ್ತವೆ. 43 ಕೇರಳದಲ್ಲಿ ಸಿಗುತ್ತವೆ
ಈ ಜಾತಿಯ ಹೂಗಿಡಗಳು ಕರ್ನಾಟದಲ್ಲಿಯೂ ಬೆಳೆಯುತ್ತವೆ. 2014ರಲ್ಲಿ ಚಿಕ್ಕಮಗಳೂರಿನ ಗಿರಿಗಳಲ್ಲಿ ಹಾಗೂ ಬಳ್ಳಾರಿಯ ಸಂಡೂರಿನ ಸ್ವಾಮಿಮಲೈ ಬೆಟ್ಟ ಶ್ರೇಣಿಯಲ್ಲಿ 2017ರಲ್ಲಿ ಈ ನೀಲಕುರಿಂಜಿ ಕಾಣಿಸಿಕೊಂಡಿದ್ದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.