ADVERTISEMENT

ತೆಲಂಗಾಣ ರಚನೆಯಾಯ್ತು; ಕನಸುಗಳ ನನಸು ಅಪೂರ್ಣ: ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2018, 13:07 IST
Last Updated 14 ಆಗಸ್ಟ್ 2018, 13:07 IST
   

ಸರೋನಗರ(ತೆಲಂಗಾಣ):ತೆಲಂಗಾಣಕ್ಕಾಗಿ ನಡೆದ ಹೋರಾಟದಲ್ಲಿ ಜೀವ ತೆತ್ತ ಎಲ್ಲರನ್ನೂ ನಾನು ಸ್ಮರಿಸುತ್ತೇನೆ. ಆದರೆ, ತೆಲಂಗಾಣ ರಚನೆಯ ನಂತರ ಜನರ ಕನಸುಗಳು ಪೂರ್ಣಗೊಳ್ಳದೆ ಉಳಿದಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

ಇಲ್ಲಿನ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಬಹಿರಂಗ ಸಭೆಯಲ್ಲಿ ರಾಹುಲ್‌ ಮಾತನಾಡಿದರು.

ಒಂದು ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಾಗಿವೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಖಾಲಿ ಸ್ಥಾನಗಳನ್ನು ತುಂಬಲು ಯಾವುದೇ ಅಧಿಸೂಚನೆ ಅಥವಾ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಿದರು.

ADVERTISEMENT

ತೆಲಂಗಾಣ ಮುಖ್ಯಮಂತ್ರಿ ಮತ್ತು ಪ್ರಧಾನಿ ತೈತರಿಗೆ ನ್ಯಾಯಯುತ ಬೆಲೆಯ ಭರವಸೆ ನೀಡಿದ್ದರು. ಆವರು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಾರೆ. ಆದರೆ, ರೈತರಿಗೆ ಏನನ್ನೂ ನೀಡುವುದಿಲ್ಲ ಎಂದು ರಾಹುಲ್‌ ಟೀಕಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ತೆಲಂಗಾಣ ಜನರು ಗಟ್ಟಿ ಧ್ವನಿಯಾಗಬೇಕು. ಪಕ್ಷಕ್ಕೆ ಸೇರ್ಪಡೆಯಾಗಲು ತೆಲಂಗಾಣ ಯುವ ಜನರನ್ನು ಆಹ್ವಾನಿಸುತ್ತೇನೆ. ನಿಮ್ಮ ಕನಸುಗಳನ್ನು ನಾವು ಪೂರ್ಣಗೊಳಿಸುತ್ತೇವೆ. ನಿಮ್ಮ ಉತ್ತಮ ಭವಿಷ್ಯಕ್ಕೆ ಈಗ ಅವಕಾಶವಿಲ್ಲ. ಉದ್ಯೋಗ ಎದರು ನೋಡುತ್ತಿದ್ದೀರಿ. ಕಾಂಗ್ರೆಸ್‌ ಉದ್ಯೋಗ ಸೃಷ್ಟಿಗೆ ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ವಿಶ್ವಮಟ್ಟದಲ್ಲಿ ಭಾರತದ ರೂಪಾಯಿ ದರ ಸರ್ವಕಾಲಿಕ ಕುಸಿತ ಕಂಡಿದೆ. ಇದು ಭಾರತದ ಅಭಿವೃದ್ಧಿಯಾ? ಎಂದು ರಾಹುಲ್‌ ಪ್ರಶ್ನಿಸಿದರು.

ಮೊದಿ ‘ಸ್ನೇಹಿತ’ರಿಗೆ ರಫೆಲ್‌ ಒಪ್ಪಂದ
ರಫೆಲ್‌ ಒಪ್ಪಂದದ ಕುರಿತು ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ‘ಜಾಗ್ವಾರ್‌, ಹಾಕ್ ಯುದ್ಧ ವಿಮಾನಗಳನ್ನು ತಯಾರಿಸಿದ ಎಚ್‌ಎಎಲ್‌ನೊಂದಿಗೆ ಹಿಂದಿನ ಯುಪಿಎ ಸರ್ಕಾರ ವಿಮಾನ ತಯಾರಿಕೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಅಲ್ಲಿಂದ ಕಿತ್ತುಕೊಂಡು ತಮ್ಮ ‘ಸ್ನೇಹಿತ’ರಿಗೆ ನೀಡಿದ್ದಾರೆ ಎಂದು ಆಪಾದಿಸಿದರು.

ನರೇಂದ್ರ ಮೋದಿ ಅವರು ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸಿ ಹತ್ತು ದಿನಗಳ ಹಿಂದೆ ಅಸ್ತಿತ್ವಕ್ಕೆ ಬಂದ ಅನಿಲ್ ಅಂಬಾನಿ ಅವರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡರು. ಸಂಸತ್‌ನಲ್ಲಿ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ನಡೆಸಿರುವ ಭ್ರಷ್ಟಾಚಾರ ಪ್ರಸ್ತಾಪಿಸಿದೆ. ಆದರೆ, ಮೋದಿ ಅವರು ಒಂದು ಮಾತೂ ಆಡಲಿಲ್ಲ’ ಎಂದು ವಾಗ್ದಾಳಿ ಮಾಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಬಂದ ರಾಹುಲ್ ಅವರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.