ADVERTISEMENT

ಹೆತ್ತವರನ್ನು ಕೊಂದು, ಅನಾಥಾಶ್ರಮದಲ್ಲಿ 4 ಮಂದಿಗೆ ಇರಿದ ವ್ಯಕ್ತಿ

ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ; ಆರೋಪಿ ಬಂಧನ

ಪಿಟಿಐ
Published 29 ಮೇ 2025, 13:05 IST
Last Updated 29 ಮೇ 2025, 13:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಇಲ್ಲಿನ ಪೂರ್ವ ಬರ್ದಮಾನ್‌ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತಂದೆ–ತಾಯಿಯನ್ನು ಕೊಂದು, ನಂತರ 120 ಕಿ.ಮೀ. ದೂರದಲ್ಲಿನ ಮದರಸಾ ಸಂಸ್ಥೆ ನಡೆಸುತ್ತಿರುವ ಅನಾಥಾಶ್ರಮಕ್ಕೆ ನುಗ್ಗಿ ಇಬ್ಬರು ಶಿಕ್ಷಕರು ಸೇರಿ ನಾಲ್ಕು ಮಂದಿಗೆ ಚಾಕುವಿನಿಂದ ತಿವಿದಿದ್ದಾನೆ.

ಉತ್ತರ 24 ಪರಗಣ ಜಿಲ್ಲೆಯ ಬನಗಾಂವ್‌ನಲ್ಲಿ ಬುಧವಾರ ದಾಳಿ ಘಟನೆ ನಡೆದಿದ್ದು, ಹಿಂಸಾಚಾರ ನಡೆದ ತಕ್ಷಣವೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

‘ಆರೋಪಿಯನ್ನು ಬಂಧಿಸಿದ ತಕ್ಷಣವೇ ಬನಗಾಂವ್‌ ಪೊಲೀಸ್‌ ಠಾಣೆಯ ಮುಂದೆ ನೂರಾರು ಜನರು ಜಮಾಯಿಸಿ ದಾಂಧಲೆ ಎಬ್ಬಿಸಿದರು. ಆರೋಪಿಯನ್ನು ನಂತರ ಪೊಲೀಸರ ವಶಕ್ಕೆ ಪಡೆಯಲಾಯಿತು. ಈ ವೇಳೆ ಉಂಟಾದ ಗಲಾಟೆಯಲ್ಲಿ ಒಬ್ಬ ಕಾನ್‌ಸ್ಟೆಬಲ್‌ ಹಾಗೂ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಗಾಯಗೊಂಡಿದ್ದಾರೆ’ ಎಂದು ಉತ್ತರ 24 ಪರಗಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿನೇಶ್‌ ಕುಮಾರ್‌ ತಿಳಿಸಿದರು.

ADVERTISEMENT

ಬಂಧಿತ ಆರೋಪಿಯನ್ನು ಹುಮಾಯೂನ್‌ ಕಬೀರ್‌ ಎಂದು ಗುರುತಿಸಲಾಗಿದ್ದು, ರಾಜ್ಯದ ಪ್ರಮುಖ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ಬಹುರಾಷ್ಟ್ರೀಯ ಕಂಪನಿಯ ಮಾಜಿ ಎಂಜಿನಿಯರ್‌ ಎಂದು ತನಿಖೆಯಲ್ಲಿ ತಿಳಿದುಬಂದಿದೆ. 

ಕಬೀರ್‌ ಅವರ ತಂದೆ ಮಸಾಫತಿಜುರ್‌ ರಹಮಾನ್‌ ಹಾಗೂ ಮಮ್ತಾಜ್‌ ಪರ್ವೀನ್‌ ಅವರಿಗೆ ಹಲವೆಡೆ ಚಾಕುವಿನಿಂದ ತಿವಿಯಲಾಗಿದ್ದು, ಮೆಮಾರಿಯಲ್ಲಿರುವ ಅವರ ಮನೆ ಮುಂದಿನ ರಸ್ತೆಯ ಎದುರುಭಾಗದಲ್ಲಿ ಮೃತದೇಹಗಳು ಸಿಕ್ಕಿವೆ. ಆರೋಪಿಯನ್ನು ವಶಕ್ಕೆ ಪಡೆದ ಬಳಿಕ ತನ್ನ ಹೆಸರು ಹಾಗೂ ವಿಳಾಸದ ಮಾಹಿತಿ ನೀಡಿದ್ದು, ಅದರ ಆಧಾರದ ಮೇಲೆ ಅವಳಿ ಕೊಲೆಗಳನ್ನು ಈತನೇ ಮಾಡಿದ್ದಾನೆ ಎಂದು ಹೇಳಲಾಗಿದೆ.

‘ಗುರುಗ್ರಾಮದ ಖಾಸಗಿ ಸಂಸ್ಥೆಯಲ್ಲಿ ಕಬೀರ್‌ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ಬಿಟ್ಟು ಹೆತ್ತವರ ಜೊತೆ ನೆಲಸಿದ್ದ. ಇಬ್ಬರನ್ನೂ ಕೊಲೆ ಮಾಡಲು ಬಲವಾದ ಕಾರಣವಿದೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪತ್ನಿಯಿಂದ ಕಬೀರ್‌ ವಿಚ್ಛೇದನ ಪಡೆದಿದ್ದು, ನಂತರ ಕೆಲಸವನ್ನು ಕಳೆದುಕೊಂಡಿದ್ದ. ಇದಾದ ಬಳಿಕ ಮಾನಸಿಕ ಆಘಾತಕ್ಕೆ ಒಳಗಾಗಿದ್ದ’ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ಕೊಲೆ ಹಾಗೂ ಯಾವ ಕಾರಣದಿಂದ ಹಲ್ಲೆ ಮಾಡಲಾಗಿದೆ ಎಂದು ತಿಳಿಯುವ ಉದ್ದೇಶದಿಂದ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಠಾಣೆಯ ಮುಂದೆ ದಾಂಧಲೆ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 10 ಮಂದಿಯನ್ನು ಬಂಧಿಸಲಾಗಿದೆ.

ಹೆತ್ತವರ ಕೊಲೆಗೆ ಸಂಬಂಧಿಸಿದಂತೆ ಹೌರಾದ ಮದರಸಾದಲ್ಲಿ ಶಿಕ್ಷಕಿಯಾಗಿರುವ ಕಬೀರ್‌ ಅವರ ಸಹೋದರಿ ತಮನ್ನಾ ರಹಮಾನ್‌ ಅವರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಬೆಳವಣಿಗೆ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.