ನವದೆಹಲಿ (ಪಿಟಿಐ): ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಮತ್ತು ಆದಾಯ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರೆಸ್ಸೆಸ್ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, ಇಂತಹ ಪರಿಣಾಮ ಬೀರಿದ ಶ್ರೇಯ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ಸಲ್ಲುತ್ತದೆ ಎಂದು ಸೋಮವಾರ ಹೇಳಿದೆ.
‘ಭಾರತ್ ಜೋಡೊ ಯಾತ್ರೆ ಪರಿಣಾಮವನ್ನು ನೋಡಿ. ದೇಶ ಛಿದ್ರಗೊಳಿಸಿ, ಸಮಾಜದಲ್ಲಿ ವಿಷ ಬಿತ್ತುವವರು ಸಹ ಬಡತನ, ನಿರುದ್ಯೋಗ ಮತ್ತು ಅಸಮಾನತೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ನಲ್ಲಿ ಮೂದಲಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್, ‘ಅಲ್ಪಸಂಖ್ಯಾತ ಸಮುದಾಯದ ಪ್ರಮುಖರನ್ನು ಭೇಟಿ ಮಾಡುತ್ತಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಬಡತನ, ಅಸಮಾನತೆ, ನಿರುದ್ಯೋಗದ ಬಗ್ಗೆ ಧ್ವನಿ ಎತ್ತುತ್ತಿರುವ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಮೇಲೆಭಾರತ್ ಜೋಡೊ ಯಾತ್ರೆ ಬೀರಿರುವ ಪರಿಣಾಮ ಎದ್ದು ಕಾಣಿಸಲಾರಂಭಿಸಿದೆ’ ಎಂದು ಟ್ವಿಟರ್ನಲ್ಲಿ ಕುಟುಕಿದ್ದಾರೆ.
‘ದತ್ತಾತ್ರೇಯ ಜೀ ಅರ್ಥಮಾಡಿಕೊಳ್ಳಿ, ಈ ಸಮಸ್ಯೆ ಮೋದಿ ಜೀ ಅವರ ನೀತಿಯಿಂದಾಗಿ ದೇಶದ 100 ಶ್ರೀಮಂತರ ಸಂಪತ್ತು ವೃದ್ಧಿಸುತ್ತಿದೆ. ಬಡವರು ಮತ್ತು ಮಧ್ಯಮವರ್ಗದ ಕುಟುಂಬಗಳ ಆದಾಯ ಕುಸಿಯುತ್ತಿದೆ’ ಎಂದು ಸಿಂಗ್ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.