ದಿಸ್ಪುರ: ದೇಶದ ಜನರ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಾಪಾಡಲು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಸ್ಸಾಂನ 1.6 ಲಕ್ಷ ಕುಟುಂಬಗಳಿಗೆ ಭೂ ದಾಖಲೆ ಹಸ್ತಾಂತರಿಸಿದ ಬಳಿಕ ಶಿವಸಾಗರ್ ಜಿಲ್ಲೆಯ ಜೆರೆಂಗಾ ಪತಾರ್ ಮೈದಾನದಲ್ಲಿ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಅಸ್ಸಾಂ ವಿಧಾನಸಭೆಗೆ ಏಪ್ರಿಲ್ನಲ್ಲಿ ಚುನಾವಣೆ ನಡೆಯಲಿದೆ.
‘ದೇಶದ ಜನರ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಾಪಾಡಲು ಕೇಂದ್ರದ ಬಿಜೆಪಿ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದೆ’ ಎಂದು ಮೋದಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ (ಸಿಎಎ) ಆಕ್ರೋಶಗೊಂಡಿರುವ ಶಿವಸಾಗರ್ ಜಿಲ್ಲೆಯ ಜನರ ಓಲೈಕೆಗೆ ಬಿಜೆಪಿ ಮುಂದಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೋದಿ ಅವರ ರ್ಯಾಲಿಯೂ ಇದರಲ್ಲಿ ಒಂದಾಗಿದೆ. ಸಿಎಎ ವಿರುದ್ಧ ಕಳೆದ ವರ್ಷ ಡಿಸೆಂಬರ್ನಲ್ಲಿ ಅಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು.
‘ಭೂ ದಾಖಲೆಗಳು ಇಲ್ಲಿನ ಸಹೋದರ ಸಹೋದರಿಯರ ದೊಡ್ಡ ಸಮಸ್ಯೆಯನ್ನು ನಿವಾರಿಸಲಿದೆ. ಭೂ ದಾಖಲೆಗಳು ಈಗ ಕೈಯಲ್ಲಿರುವ ಕಾರಣ ರೈತರಿನ್ನು ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಬಹುದು. ಬ್ಯಾಂಕ್ನಿಂದ ಸಾಲವನ್ನೂ ಪಡೆಯಬಹುದು. 2016ರ ವರೆಗೆ 6 ಲಕ್ಷ ಕುಟುಂಬಗಳಿಗೆ ಭೂ ದಾಖಲೆಗಳಿರಲಿಲ್ಲ’ ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.