ADVERTISEMENT

ನಾಲ್ಕು ದಿನಗಳಲ್ಲಿ ಸಂಸತ್‌ ಭವನದ 400 ಮಂದಿಗೆ ಕೋವಿಡ್‌

ಶೆಮಿಜ್‌ ಜಾಯ್‌
Published 10 ಜನವರಿ 2022, 3:08 IST
Last Updated 10 ಜನವರಿ 2022, 3:08 IST
ಸಂಸತ್‌ ಭವನದ ಚಿತ್ರ
ಸಂಸತ್‌ ಭವನದ ಚಿತ್ರ    

ನವದೆಹಲಿ: ಸಂಸತ್ತಿನ ಸುಮಾರು 400 ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಇದರ ಹಿಂದೆಯೇ ಸಿಬ್ಬಂದಿ ಹಾಜರಾತಿಗೆ ಸಂಬಂಧಿಸಿದ ಸರ್ಕಾರ ವಿವಿಧ ನಿರ್ಬಂಧ ಹೇರಿದೆ.

ಮೂಲಗಳ ಪ್ರಕಾರ, ರಾಜ್ಯಸಭೆಯ 65, ಲೋಕಸಭೆಯ 200 ಮಂದಿ ಸಿಬ್ಬಂದಿಗೆ ಸೋಂಕು ದೃಡಪಟ್ಟಿದೆ. ಅಲ್ಲದೆ, ಇತರೆ 133 ಸಿಬ್ಬಂದಿಗೂ ಸೋಂಕು ಇರುವುದು ಪತ್ತೆಯಾಗಿದೆ.

ಬಜೆಟ್‌ ಅಧಿವೇಶನ ಆರಂಭಕ್ಕೂ ಮುನ್ನ ಈ ಬೆಳವಣಿಗೆ ನಡೆದಿದೆ. ಬಜೆಟ್ ಅಧಿವೇಶನ ಸಾಮಾನ್ಯವಾಗಿ ಜನವರಿ ಅಂತ್ಯದಲ್ಲಿ ಆರಂಭವಾಗಲಿದೆ.

ADVERTISEMENT

ಇದರ ಹಿಂದೆಯೇ ರಾಜ್ಯಸಭೆ ಸಚಿವಾಲಯವು, ಕಾರ್ಯದರ್ಶಿ ಮತ್ತು ಅದರ ಕೆಳಹಂತದ ಸಿಬ್ಬಂದಿಯು ಮಾಸಾಂತ್ಯದವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಆದೇಶಿಸಿದೆ. ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ನಿಯಂತ್ರಣ ಕ್ರಮಗಳಿಗೆ ಸೂಚಿಸಿದ್ದರು.

ಲೋಕಸಭೆ ಸಚಿವಾಲಯವು, ಅಧೀನ ಕಾರ್ಯದರ್ಶಿ ಹಾಗೂ ಕೆಳಗಿನ ಹಂತದ ಶೇ 50ರಷ್ಟು ಸಿಬ್ಬಂದಿ ಪಾಳಿ ಆಧಾರದಲ್ಲಿ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರು ನಿರ್ಧರಿಸಬೇಕು ಎಂದು ಸೂಚಿಸಿದೆ.

ದೆಹಲಿಯಲ್ಲಿ ಲಾಕ್‌ಡೌನ್‌ ಇಲ್ಲ–ಸಿ.ಎಂ: ವಲಸೆ ಕಾರ್ಮಿಕರು, ವ್ಯಾಪಾರಿಗಳಲ್ಲಿನ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಭಾನುವಾರ, ‘ರಾಜಧಾನಿಯಲ್ಲಿ ಲಾಕ್‌ಡೌನ್‌ ಹೇರುವುದಿಲ್ಲ ಕನಿಷ್ಠ ನಿರ್ಬಂಧ ಹೇರಲಾಗುವುದು‘ ಎಂದು ತಿಳಿಸಿದೆ. ರಾಜಧಾನಿಯಲ್ಲಿ ಕೋವಿಡ್ ತೀವ್ರಗತಿಯಲ್ಲಿ ಏರುತ್ತಿದೆ. ವಲಸೆ ಕಾರ್ಮಿಕರಿಗೆ ಲಾಕ್‌ಡೌನ್‌ ಭೀತಿ ಕಾಡುತ್ತಿದೆ.

ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಎಲ್ಲರೂ ಮಾಸ್ಕ್‌ ಧರಿಸಿದರೆ ಲಾಕ್‌ಡೌನ್‌ ಅಗತ್ಯ ವಿಲ್ಲ. ಸದ್ಯ, ಆಸ್ಪತ್ರೆಗೆ ಸೇರುವವರ ಸಂಖ್ಯೆ ಯೂ ಕಡಿಮೆ ಇದೆ’ ಎಂದು ಹೇಳಿದರು.

ತಮಿಳುನಾಡಿನಲ್ಲಿ ಒಂದು ದಿನ ಲಾಕ್‌ಡೌನ್‌: ಕೋವಿಡ್‌ ತಡೆ ಕ್ರಮವಾಗಿ ತಮಿಳುನಾಡಿನಲ್ಲಿ ಭಾನುವಾರ ಒಂದು ದಿನ ಲಾಕ್‌ಡೌನ್‌ ಘೋಷಿಸಲಾಗಿತ್ತು. ಅಗತ್ಯ ಸೇವೆ ಹೊರತುಪಡಿಸಿ ಉಳಿ ದೆಲ್ಲ ಚಟುವಟಿಕೆಗಳು ಬಂದ್‌ ಆಗಿದ್ದವು. ಮಾರುಕಟ್ಟೆ ಸೇರಿದಂತೆ ಬಹು ತೇಕ ಪ್ರದೇಶ ನಿರ್ಜನವಾಗಿದ್ದವು. ನಗರಸಾರಿಗೆ ಸೇವೆ ರದ್ದುಪಡಿಸಲಾಗಿತ್ತು.

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಸೋಮವಾರದಿಂದ ಜಾರಿಗೆ ಬರುವಂತೆ 1 ರಿಂದ 9ನೇ ತರಗತಿವರೆಗೆ ರಜೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್‌ 4ರಂದು ತರಗತಿಗಳು ಪುನರಾರಂಭಗೊಂಡಿದ್ದವು.

ಮಹಾರಾಷ್ಟ್ರದಲ್ಲಿ ಮಾರ್ಗಸೂಚಿ ಪರಿಷ್ಕರಣೆ: ಮಹಾರಾಷ್ಟ್ರ ಸರ್ಕಾರ ಭಾನುವಾರ ಕೋವಿಡ್‌ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಜಿಮ್‌, ಪಾರ್ಲರ್‌ಗಳ ಮೇಲೆ ನಿರ್ಬಂಧ ಹೇರಿದ್ದು, ಶೇ 50ರಷ್ಟು ಹಾಜರಿಗೆ ಅವಕಾಶ ಕಲ್ಪಿಸಿದೆ. ಶನಿವಾರ, ಜಿಮ್‌ ಮತ್ತು ಸಲೂನ್‌ಗಳನ್ನು ಮುಚ್ಚಲು ಆದೇಶಿಸಿತ್ತು. ಲಸಿಕೆ ಪಡೆದವರು ಮಾತ್ರ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.

ಶೇ 20 ವಿಮಾನಯಾನ ರದ್ದು: ಸೋಂಕು ಏರಿಕೆ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ಶೇ 20ರಷ್ಟು ಸೇವೆಯನ್ನು ರದ್ದುಪಡಿಸಿದೆ. ಜನವರಿ 31ರವರೆಗೆ ಕಾಯ್ದಿರಿಸಿದ್ದ ಟಿಕೆಟ್‌ಗೆ ಅನ್ವಯಿಸಿ, ಪ್ರಯಾಣಿಕರಿಗೆ ಮಾ. 31ರವರೆಗೆ ಟಿಕೆಟ್‌ ವ್ಯತ್ಯಾಸದ ಮೊತ್ತ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದೆ.

ಹಿಮಾಚಲ ಪ್ರದೇಶದಲ್ಲಿ ಕಾರ್ಯಕ್ರಮಗಳು ರದ್ದು: ಕೋವಿಡ್ ಸೋಂಕು ತಡೆ ಕ್ರಮವಾಗಿ ಜನವರಿ 24ರವರೆಗೆ ಎಲ್ಲ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಹಿಮಾಚಲ ಪ್ರದೇಶ ಸರ್ಕಾರ ನಿರ್ಬಂಧ ಏರಿದೆ. ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಐದು ದಿನದ ಕೆಲಸ ಅವಧಿಯನ್ನು ಜಾರಿಗೊಳಿಸಿದೆ.

ಮುಖ್ಯಮಂತ್ರಿ ಜೈರಾಂ ಠಾಕೂರ್‌ ಜ. 15ರವರೆಗೆ ತಮ್ಮ ಎಲ್ಲ ಕಾರ್ಯಕ್ರಮ ರದ್ದುಪಡಿಸಿದ್ದಾರೆ. ರಾಜ್ಯದಲ್ಲಿ 12 ದಿನದಲ್ಲಿ 3,000 ಪ್ರಕರಣ ವರದಿಯಾಗಿದ್ದು, ಈ ಅವಧಿಯಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ.

ಸಂಸದ ವರುಣ್‌ ಗಾಂಧಿಗೆ ಕೋವಿಡ್‌: ಬಿಜೆಪಿ ಸಂಸದ ವರುಣ್‌ ಗಾಂಧಿ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

ಐದು ರಾಜ್ಯಗಳಿಗೆ ಚುನಾವಣೆ ಆಯೋಗ ಚುನಾವಣೆ ಘೋಷಿಸಿದೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಮುಂಜಾಗ್ರತೆಯಾಗಿ ಕೋವಿಡ್‌ ಲಸಿಕೆ ಪಡೆಯುವಂತೆಯೂ ನೋಡಿಕೊಳ್ಳಬೇಕು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.