ADVERTISEMENT

‘ಸರ್ಕಾರ್‌’ ಸಿನಿಮಾ ವಿರುದ್ಧದ ಪ್ರತಿಭಟನೆಗೆ ರಜನಿಕಾಂತ್‌ ಗರಂ

ಪಿಟಿಐ
Published 10 ನವೆಂಬರ್ 2018, 12:23 IST
Last Updated 10 ನವೆಂಬರ್ 2018, 12:23 IST
ರಜನಿಕಾಂತ್‌
ರಜನಿಕಾಂತ್‌   

ಚೆನ್ನೈ: ನಟ ವಿಜಯ್‌ ಅಭಿನಯದ ‘ಸರ್ಕಾರ್‌’ ಸಿನಿಮಾದಲ್ಲಿನ ನಿರ್ದಿಷ್ಟ ದೃಶ್ಯವೊಂದರ ವಿರುದ್ಧ ಪ್ರತಿಭಟನೆ ನಡೆಸಿರುವ ಎಐಎಡಿಎಂಕೆ ಪಕ್ಷದ ವಿರುದ್ಧ ಖ್ಯಾತ ನಟ ರಜನಿಕಾಂತ್‌ ಹರಿಹಾಯ್ದಿದ್ದಾರೆ.

ಸೆನ್ಸಾರ್‌ ಮಂಡಳಿಯಿಂದ ಪ್ರಮಾಣ ಪತ್ರ ಸಿಕ್ಕಿದ ತಕ್ಷಣ ಆ ಚಿತ್ರದ ದೃಶ್ಯಕ್ಕೆ ಮನ್ನಣೆ ಕೊಟ್ಟಂತೆಯೂ ಅಲ್ಲ ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಆಡಳಿತ ಪಕ್ಷವು ಸೌಲಭ್ಯ ವಂಚಿತ ವರ್ಗಗಳಿಗೆ ಮೀಸಲಾತಿ ಮತ್ತು ಸಮಾನತೆ ಸಾಧಿಸಲು ಕೊಡುತ್ತಿರುವ ಸರ್ಕಾರಿ ಉಚಿತ ಯೋಜನೆಗಳ ಸುತ್ತ ಈ ವಿವಾದಿತ ದೃಶ್ಯ ಸುತ್ತಿಕೊಂಡಿದೆ.

ADVERTISEMENT

ದೀಪಾವಳಿ ವೇಳೆ ಬಿಡುಗಡೆಯಾದ ‘ಸರ್ಕಾರ್‌’ ಚಿತ್ರದಲ್ಲಿನ ಈ ದೃಶ್ಯ ಕೈಬಿಡುವಂತೆ ಎಐಎಡಿಎಂಕೆ ಶುಕ್ರವಾರ ಪ್ರತಿಭಟನೆ ನಡೆಸಿರುವುದಕ್ಕೆ ರಜನಿಕಾಂತ್‌ ತರಾಟೆ ತೆಗೆದುಕೊಂಡಿದ್ದು, ಸಿನಿಮಾದಲ್ಲಿನ ದೃಶ್ಯ ಕೈಬಿಡುವಂತೆ ಇಟ್ಟಿರುವ ಬೇಡಿಕೆಗಳನ್ನೂ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಎಐಎಡಿಎಂಕೆ ತಿರುಗೇಟು

ಎಐಎಡಿಎಂಕೆಯು ತನ್ನ ಮುಖವಾಣಿ ‘ನಮತು ಪುರಚಿ ತಲೈವಿ ಅಮ್ಮಾ’ ಪತ್ರಿಕೆಯಲ್ಲಿ ನಟ ರಜನಿಕಾಂತ್‌ ಅವರ ಹೇಳಿಕೆಯನ್ನು ಪ‍್ರಶ್ನಿಸಿದೆ. ಮೀಸಲಾತಿ ಮತ್ತು ಉಚಿತ ಯೋಜನೆಗಳನ್ನು ಅದು ಬಲವಾಗಿ ಸಮರ್ಥಿಸಿಕೊಂಡಿದೆ.

‘ಉತ್ತುಂಗದಲ್ಲಿರುವ ನಟ ಪ್ರಾಮಾಣಿಕ ಪ್ರತಿಕ್ರಿಯೆ ಕೊಡಬೇಕು. ಆಹಾರದ ಪೊಟ್ಟಣದಲ್ಲಿ ಹಲ್ಲಿ ಕಾಣಿಸಿದರೆ, ಆ ಪೊಟ್ಟಣವನ್ನು ಎಸೆಯುತ್ತೀರಾ ಅಥವಾ ಅದನ್ನು ಪ್ರಮಾಣೀಕರಿಸಲಾಗಿದೆ ಎಂದು ಸೇವಿಸುತ್ತೀರಾ’ ಎಂದು ಅದು ಪ್ರಶ್ನಿಸಿದೆ.

ಸೆನ್ಸಾರ್‌ ಮಂಡಳಿಯ ಪ್ರಮಾಣ ಪತ್ರ ಸಿಕ್ಕಿದೆ ಎಂದು ಇಂತಹ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಹಿರಿಯ ನಟರೆನಿಸಿಕೊಂಡವರು ಸಿನಿಮಾ ನಿರ್ದೇಶಕ ಎ.ಆರ್‌.ಮುರುಗದಾಸ್‌ ಅವರಿಗೆ ಬುದ್ಧಿವಾದ ಹೇಳಬೇಕು ಎಂದು ಒತ್ತಾಯಿಸಲಾಗಿದೆ.

ಸೆನ್ಸಾರ್‌ ಪರೀಕ್ಷೆಯಲ್ಲಿ ಆ ಚಿತ್ರ ಪಾಸಾಗಿದ್ದರೂ ತಪ್ಪು ಮಾಹಿತಿಗಳಿದ್ದರೆ ಆ ಸಿನಿಮಾದ ಪ್ರದರ್ಶನ ನಿಲ್ಲಿಸಬೇಕು. ಅದು ಬಿಟ್ಟು, ಸಮರ್ಥನೆಗೆ ಇಳಿಯುವುದಲ್ಲ. ವಿವಾದ ಹುಟ್ಟು ಹಾಕಿರುವ ನಿರ್ದಿಷ್ಟ ದೃಶ್ಯವನ್ನು ಸಿನಿಮಾದಿಂದ ತೆಗೆದು ಹಾಕಲೇಬೇಕು ಎಂದು ಎಐಎಡಿಎಂಕೆ ಆಗ್ರಹಿಸಿದೆ.

ಈ ಪ್ರತಿಭಟನೆಯ ನಡುವೆ ‘ಸರ್ಕಾರ್‌’ ನಿರ್ಮಾಪಕರು ಸಿನಿಮಾದಲ್ಲಿನ ಆಕ್ಷೇಪಾರ್ಹ ದೃಶ್ಯವನ್ನು ಶುಕ್ರವಾರ ತೆಗೆದು ಹಾಕಿದ್ದಾರೆ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಮತ್ತು ಎಐಎಡಿಎಂಕೆ ನಾಯಕರು ಮತ್ತು ಆ ಪಕ್ಷದ ಕಲ್ಯಾಣ ಯೋಜನೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಸಂಭಾಷಣೆಗಳನ್ನು ಪ್ರೇಕ್ಷಕರಿಗೆ ಕೇಳಿಸದಂತೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.