
ನವದೆಹಲಿ: ಮುಂಬೈಗೆ ಹೊರಟಿದ್ದ ಏರ್ಇಂಡಿಯಾ ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ದೆಹಲಿಯಲ್ಲಿ ಸೋಮವಾರ ತುರ್ತು ಭೂಸ್ಪರ್ಶ ಮಾಡಿದೆ.
335 ಜನರಿದ್ದ ಎಐ887 ವಿಮಾನವು ದೆಹಲಿಯಿಂದ ಹೊರಟು ಸುಮಾರು ಒಂದು ಗಂಟೆ ಹಾರಾಟ ನಡೆಸಿತ್ತು. ತಾಂತ್ರಿಕ ದೋಷ ಕಂಡುಬಂದ ಕಾರಣ ಮತ್ತೆ ದೆಹಲಿಗೆ ಮರಳಿ ಭೂಸ್ಪರ್ಶ ಮಾಡಿತು ಎಂದು ಮೂಲಗಳು ತಿಳಿಸಿವೆ.
‘ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ಅಪಾಯಗಳು ಆಗಿಲ್ಲ’ ಎಂದು ಏರ್ ಇಂಡಿಯಾ ತಿಳಿಸಿದೆ.
ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ಏರ್ ಇಂಡಿಯಾಕ್ಕೆ ನಿರ್ದೇಶನ ನೀಡಿದೆ.
‘ವಿಮಾನದ ಎರಡನೇ ಎಂಜಿನ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು, ತಕ್ಷಣ ಅದನ್ನು ಸ್ಥಗಿತಗೊಳಿಸಿ, ವಿಮಾನವನ್ನು ಇಳಿಸಲಾಯಿತು’ ಎಂದು ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ.
‘ಪರಿಶೀಲನೆಯು ಪ್ರಗತಿಯಲ್ಲಿದೆ. ವಿಮಾನ ಸುರಕ್ಷತಾ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ಶಾಶ್ವತ ತನಿಖಾ ಮಂಡಲಿಯು ತನಿಖೆ ನಡೆಸುತ್ತಿದೆ’ ಎಂದು ಡಿಜಿಸಿಎ ತಿಳಿಸಿದೆ.
‘ಹಾರಾಟಕ್ಕೆ ಮೊದಲು ವಿಮಾನದ ಎಂಜಿನ್ನಲ್ಲಿ ದೋಷ ಕಂಡುಬಂದಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.