ಚಂಡೀಗಢ: ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಮಜಿಠಿಯಾ ಅವರನ್ನು ಪಂಜಾಬ್ ವಿಚಕ್ಷಣಾ ದಳ ಬುಧವಾರ ಬಂಧಿಸಿದೆ.
ಅಮೃತಸರ ಮತ್ತು ಚಂಡೀಗಢದಲ್ಲಿರುವ ಮಜಿಠಿಯಾ ನಿವಾಸ ಸೇರಿದಂತೆ 25 ಸ್ಥಳಗಳಲ್ಲಿ ಶೋಧ ನಡೆಸಿದ ಬಳಿಕ ಮಜಿಠಿಯಾ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಜಿಠಿಯಾ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿರುವುದಾಗಿ ಅವರ ಪತ್ನಿ, ಶಾಸಕಿ ಗನಿವ್ ಕೌರ್ ಅವರು ತಿಳಿಸಿದ್ದಾರೆ. ಆದರೆ ವಿಚಕ್ಷಣಾ ದಳವು ಬಂಧನದ ಕಾರಣವನ್ನು ಬಹಿರಂಗಪಡಿಸಿಲ್ಲ.
ವಿಚಕ್ಷಣಾ ದಳ ಶೋಧ ನಡೆಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಬಿತ್ತರವಾಗುತ್ತಿದ್ದಂತೆ ಅಕಾಲಿ ದಳದ ನಾಯಕರು ಮತ್ತು ಬೆಂಬಲಿಗರು ಮಜಿಠಿಯಾ ನಿವಾಸದತ್ತ ದೌಡಾಯಿಸಿದರು, ಭಗವಂತ್ ಮಾನ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಶಿರೋಮಣಿ ಅಕಾಲಿ ದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಅವರ ಸಂಬಂಧಿಯಾಗಿರುವ ಮಜಿಠಿಯಾ ವಿರುದ್ಧ 2021ರಲ್ಲಿ ಮಾದಕವಸ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇದರ ತನಿಖೆಯೂ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.