ADVERTISEMENT

ಅಖಿಲೇಶ್ ಸೈಕಲ್ ರ‍್ಯಾಲಿಗೆ ಚಾಲನೆ ನೀಡಲಿದೆ 'ಖಜಾಂಚಿ' ಕುಟುಂಬ!

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2018, 10:47 IST
Last Updated 10 ಆಗಸ್ಟ್ 2018, 10:47 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್    

ಲಖನೌ: 2019ರ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ 50 ಕಿಮೀ ಸೈಕಲ್ ರ‍್ಯಾಲಿ ಮೂಲಕ ಪ್ರಚಾರ ಆರಂಭಿಸಲಿದ್ದಾರೆ.
2016ರಲ್ಲಿ ನೋಟು ರದ್ದತಿ ವೇಳೆ ಬ್ಯಾಂಕ್‍ನಿಂದ ಹಣ ವಿತ್ ಡ್ರಾ ಮಾಡಲು ನಿಂತಿದ್ದ ವೇಳೆ ತುಂಬು ಗರ್ಭಿಣಿಯೊಬ್ಬರು ಬ್ಯಾಂಕ್ ಆವರಣದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು.ಡಿಸೆಂಬರ್ 2, 2016ರಲ್ಲಿ ಹುಟ್ಟಿದ ಆ ಮಗುವಿಗೆ ಬ್ಯಾಂಕ್ ಮ್ಯಾನೇಜರ್ಖಜಾಂಚಿ ಎಂದು ಹೆಸರಿಟ್ಟಿದ್ದರು. ಅಖಿಲೇಶ್ ಅವರ ಸೈಕಲ್ ರ‍್ಯಾಲಿಗೆ ಖಜಾಂಚಿಯ ಕುಟುಂಬ ಚಾಲನೆ ನೀಡಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ನೋಟು ರದ್ಧತಿಯನ್ನು ವಿರೋಧಿಸಿದ್ದ ಅಖಿಲೇಶ್ ಖಜಾಂಚಿ ಹುಟ್ಟಿದಾಗ ಮುಖ್ಯಮಂತ್ರಿ ನಿಧಿಯಿಂದ ₹1 ಲಕ್ಷ ನೀಡಿದ್ದರು. ಕಳೆದ ವರ್ಷ ನವೆಂಬರ್ 8ರಂದು ನೋಟು ರದ್ಧತಿಯ ಮೊದಲ ವಾರ್ಷಿಕದ ವೇಳೆ ಅಖಿಲೇಶ್ ಆ ಮಗುವಿನ ಕುಟುಂಬಕ್ಕೆ ₹10,000 ನೀಡಿದ್ದಲ್ಲದೆ, ಆ ಕುಟುಂಬ ವಾಸಿಸುತ್ತಿದ್ದ ಕಾನ್ಪುರ್ ದೆಹಾತ್‍ನಲ್ಲಿರುವ ಅನಂತ್‍ಪೂರ್ವ ಗ್ರಾಮವನ್ನು ದತ್ತು ಪಡೆದಿದ್ದರು.

ಚುನಾವಣಾ ಪ್ರಚಾರ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದ್ದಾರೆ. ಅಖಿಲೇಶ್ ಅವರ ಸೈಕಲ್ ರ‍್ಯಾಲಿ ಕನೌಜ್‍ನಿಂದ ಆರಂಭವಾಗಲಿದ್ದು ಆಗ್ರಾ- ಲಖನೌ ಎಕ್ಸ್ ಪ್ರೆಸ್ ವೇನಲ್ಲಿ ಕೊನೆಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.