ಲಖನೌ: ಕಾನ್ಪುರದ ರಾಜ್ಯ ಮಹಿಳಾ ಆಶ್ರಯ ನಿಲಯದಲ್ಲಿರುವ 57 ಮಹಿಳೆಯರಿಗೆ ಕೋವಿಡ್ ದೃಢಪಟ್ಟಿದ್ದು, ಅವರಲ್ಲಿ ಐವರು ಬಾಲಕಿಯರುಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ, ಬಾಲಕಿಯರ ಮೇಲಾಗಿರುವ ದೈಹಿಕ ಶೋಷಣೆ ಕುರಿತು ತನಿಖೆ ನಡೆಸಬೇಕೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಒತ್ತಾಯಿಸಿದ್ದಾರೆ.
‘ಮಹಿಳಾ ಆಶ್ರಯ ನಿಲಯದಲ್ಲಿ ಪರೀಕ್ಷೆಗೊಳಗಾಗಿದ್ದ ಬಾಲಕಿಯೊಬ್ಬಳು ಏಡ್ಸ್ನಿಂದ ಬಳಲುತ್ತಿದ್ದಾಳೆ’ ಎಂದೂ ಅವರು ಹೇಳಿದ್ದಾರೆ.
‘ನಿಲಯಕ್ಕೆ ಬರುವ ವೇಳೆಗಾಗಲೇ ಬಾಲಕಿಯರು ಗರ್ಭಿಣಿಯರಾಗಿದ್ದರು’ ಎಂದು ಕಾನ್ಪುರ ಜಿಲ್ಲಾಡಳಿತ ಭಾನುವಾರ ಸ್ಪಷ್ಟಪಡಿಸಿತ್ತು.
‘ಕಾನ್ಪುರದ ಸರ್ಕಾರಿ ಮಹಿಳಾ ಆಶ್ರಯ ನಿಲಯದಿಂದ ಬಂದ ಸುದ್ದಿಯೊಂದು ಉತ್ತರ ಪ್ರದೇಶದಲ್ಲಿ ಆಕ್ರೋಶ ಸೃಷ್ಟಿಸಿದೆ. ಇಲ್ಲಿರುವ ಕೆಲ ಬಾಲಕಿಯರು ಗರ್ಭಿಣಿಯರಾಗಿದ್ದಾರೆ. 57 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಅದರಲ್ಲಿ ಒಬ್ಬರಿಗೆ ಏಡ್ಸ್ ಇರುವುದು ತಿಳಿದು ಬಂದಿದೆ. ಇವರೆಲ್ಲರಿಗೂ ತಕ್ಷಣವೇ ಚಿಕಿತ್ಸೆ ನೀಡಬೇಕು’ ಎಂದು ಅಖಿಲೇಶ್ ಯಾದವ್ ಟ್ವೀಟ್ನಲ್ಲಿ ಒತ್ತಾಯಿಸಿದ್ದಾರೆ.
‘ಬಾಲಕಿಯರ ದೈಹಿಕ ಶೋಷಣೆಗೆ ಕಾರಣರಾದವರ ವಿರುದ್ಧ ಸರ್ಕಾರ ತಕ್ಷಣವೇ ತನಿಖೆ ಕೈಗೊಳ್ಳಬೇಕು’ ಎಂದೂ ಅವರು ಟ್ವೀಟ್ನಲ್ಲಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.