ಲಖನೌ: ಗೃಹ ಬಳಕೆ ಅಡುಗೆ ಅನಿಲ (ಎಲ್ಪಿಜಿ) ದರ ಹೆಚ್ಚಳ ಮಾಡಿರುವ ಕ್ರಮವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಐದು ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯವಾದ ನಂತರ ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಜನರಿಗೆ 'ಹಣದುಬ್ಬರದ ಮತ್ತೊಂದು ಉಡುಗೊರೆ' ಎಂದಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 80 ಪೈಸೆಯಷ್ಟು ಹೆಚ್ಚಿಸಲಾಗಿದೆ ಹಾಗೂ ಅಡುಗೆ ಅನಿಲದ ಸಿಲಿಂಡರ್ ಬೆಲೆ ₹50ರಷ್ಟು ಏರಿಕೆ ಮಾಡಲಾಗಿದೆ. ಸುಮಾರು ನಾಲ್ಕೂವರೆ ತಿಂಗಳ ಅಂತರದಲ್ಲಿ ಮೊದಲ ಬಾರಿಗೆ ಇಂಧನ ದರದಲ್ಲಿ ಹೆಚ್ಚಳವಾಗಿದೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, 'ಬಿಜೆಪಿ ಸರ್ಕಾರದಿಂದ ಜನರಿಗೆ ಹಣದುಬ್ಬರದ ಮತ್ತೊಂದು ಉಡುಗೊರೆ... ಲಖನೌದಲ್ಲಿ ಎಲ್ಪಿಜಿ ಸಿಲಿಂಡರ್ ದರ ₹1,000 ಸಮೀಪಿಸಿದೆ ಹಾಗೂ ಪಾಟ್ನಾದಲ್ಲಿ ₹1,000 ದಾಟಿದೆ! ಚುನಾವಣೆಗಳು ಮುಗಿದಿದ್ದು, ಹಣದುಬ್ಬರ ಶುರುವಾಗಿದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ನಿಗದಿಯಾದ ಹಿನ್ನೆಲೆ ಕಳೆದ ವರ್ಷ ನವೆಂಬರ್ 4ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿಲ್ಲ. ಅಕ್ಟೋಬರ್ 6ರ ಬಳಿಕ ಗೃಹ ಬಳಕೆ ಎಲ್ಪಿಜಿ ದರಗಳಲ್ಲಿ ಪರಿಷ್ಕರಣೆ ಆಗಿರಲಿಲ್ಲ. ಅದಕ್ಕೂ ಮುನ್ನ 2021ರ ಜುಲೈನಿಂದ ಅಕ್ಟೋಬರ್ ನಡುವೆ ಪ್ರತಿ ಸಿಲಿಂಡರ್ ಬೆಲೆ ₹100ರವರೆಗೂ ಹೆಚ್ಚಳವಾಗಿತ್ತು.
ಇದನ್ನೂ ಓದಿ–ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ₹50 ಏರಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.