ದೇಶದಲ್ಲಿ ಕೋವಿಡ್ ಮತ್ತು ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿರಾಜ್' ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ನಿಗದಿಯಂತೆ ಜ.21ಕ್ಕೆ ಸಿನಿಮಾ ಬಿಡುಗಡೆಯಾಗಬೇಕಿತ್ತು.
ಮೂಲಗಳ ಪ್ರಕಾರ, 'ದೇಶದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುವ ಬಲವನ್ನು ಹೊಂದಿರುವ ಬ್ಲಾಕ್ಬಸ್ಟರ್ ಸಿನಿಮಾ ನಿಮ್ಮ ಮುಂದಿದೆ. ಆದರೆ, ಅಂತಹ ಬೃಹತ್ ಸಿನಿಮಾವನ್ನು ಮುಂದಿಟ್ಟುಕೊಂಡು ನೀವು ಜೂಜಾಟವಾಡಲು ಸಾಧ್ಯವಿಲ್ಲ. ಕೋವಿಡ್ನಿಂದ ತತ್ತರಿಸಿರುವ ಜನರನ್ನು ಮತ್ತೆ ಚಿತ್ರಮಂದಿರಗಳತ್ತ ಕರೆತರುವಲ್ಲಿ 'ಪೃಥ್ವಿರಾಜ್' ನೆರವಾಗುತ್ತದೆ. ಹಾಗಾಗಿಯೇ ಈ ಉದ್ದೇಶ ಈಡೇರದ ಸಮಯದಲ್ಲಿ ಅದನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ವ್ಯವಹಾರದ ದೃಷ್ಟಿಯಿಂದಲೂ ಸಹ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುವಂತಹ ಚಿತ್ರಕ್ಕೆ ರಾಜಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ' ಎಂದು ಚಿತ್ರತಂಡ ಹೇಳಿರುವುದಾಗಿ ವರದಿಯಾಗಿದೆ.
'ಸಿನಿಮಾವನ್ನು ಮುಂದೂಡುವ ಯಾವುದೇ ಯೋಚನೆ ಇರಲಿಲ್ಲ. ಆದರೆ, ಓಮೈಕ್ರಾನ್ ಮತ್ತು ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು' ಎಂದಿದ್ದಾರೆ.
ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದಾದ್ಯಂತ ಈಗಾಗಲೇ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ ಮತ್ತು ದೆಹಲಿಯಂತ ಅನೇಕ ಕಡೆ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ.
'ಭಾರತ ಸೇರಿದಂತೆ ಸಾಗರೋತ್ತರ ದೇಶಗಳಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಸುಧಾರಿಸಬಹುದೆಂದು ಕೊನೆಯ ನಿಮಿಷದವರೆಗೂ ಯಶ್ ರಾಜ್ ಫಿಲ್ಮ್ಸ್ ಎದುರು ನೋಡುತ್ತಿತ್ತು. ಆದರೆ, ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಬೇರೆ ದಾರಿಯೇ ಇಲ್ಲದೆ ದೊಡ್ಡ ಸಿನಿಮಾದ ಬಿಡುಗಡೆಯನ್ನು ತಡೆಹಿಡಿಯಲಾಗಿದೆ'.
ಪೃಥ್ವಿರಾಜ್ ಸಿನಿಮಾವನ್ನು ಬರಹಗಾರ-ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ. ಇದನ್ನು 'ಯಶ್ ರಾಜ್ ಫಿಲ್ಮ್ಸ್' ನಿರ್ಮಾಣ ಮಾಡಿದ್ದು, ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರೆ, ಅವರ ಎದುರು ಸನ್ಯೋಗಿತಾ ಪಾತ್ರದಲ್ಲಿ 2017ರ ಮಿಸ್ ವರ್ಲ್ಡ್ ವಿಜೇತೆ ಮಾನುಶಿ ಚಿಲ್ಲರ್ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.