ADVERTISEMENT

ಅಲೀಗಡ ಹೆಸರು ಬದಲು ನಿರ್ಣಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 19:45 IST
Last Updated 17 ಆಗಸ್ಟ್ 2021, 19:45 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ: ಅಲಹಾಬಾದ್‌ ಅನ್ನು ಪ್ರಯಾಗರಾಜ್‌ ಎಂದೂ ಫೈಜಾಬಾದ್‌ ಅನ್ನು ಅಯೋಧ್ಯಾ ಎಂದೂ ಬದಲಾಯಿಸಿದ ಬಳಿಕ ಅಲೀಗಡವನ್ನು ಹರಿಗಡ ಎಂದು ಬದಲಾಯಿಸುವ ಬೇಡಿಕೆಯು
ಕೇಳಿ ಬಂದಿದೆ.

ಅಲೀಗಡವನ್ನು ಹರಿಗಡ ಎಂದು ಬದಲಾಯಿಸುವ ನಿರ್ಣಯವನ್ನು ಅಲೀಗಡ ಜಿಲ್ಲಾ ಪಂಚಾಯಿತಿ ಮಂಡಳಿಯು ಅಂಗೀಕರಿಸಿದೆ. ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಣಯನ್ನು ಅಂಗೀಕರಿಸುವಾಗ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಹಾಜರಿದ್ದರು. ನಿರ್ಣಯವು ಅವಿರೋಧವಾಗಿ ಅಂಗೀಕಾರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಮೈನ್‌ಪುರಿಯ ಹೆಸರನ್ನು ಮಾಯನ್‌ ನಗರ ಎಂದು ಬದಲಾಯಿಸುವ ನಿರ್ಣಯವನ್ನು ಮೈನ್‌ಪುರಿ ಜಿಲ್ಲಾ ಪಂಚಾಯಿತಿ ಅಂಗೀಕರಿಸಿದೆ. ಈ ನಗರವನ್ನು ಮಾಯನ್‌ ಮುನಿ ಸ್ಥಾಪಿಸಿದ್ದ. ಹಾಗಾಗಿ, ನಗರದ ಹೆಸರು ಮಾಯನ್‌ ನಗರ ಎಂದಿರುವುದೇ ಸೂಕ್ತ ಎಂದು ಪಂಚಾಯಿತಿ ಹೇಳಿದೆ.

ಅಲೀಗಡದ ಹೆಸರು ಬದಲಾವಣೆಯ ಪ್ರಸ್ತಾವವು 1992ರಲ್ಲಿ ಕಲ್ಯಾಣ್‌ ಸಿಂಗ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿದ್ದಾಗಲೇ ಇತ್ತು. ಅಲೀಗಡವನ್ನು ಹರಿಗಡ ಎಂದು ಬದಲಾಯಿಸಬೇಕು ಎಂಬ ಪ್ರಸ್ತಾವವನ್ನು ವಿಶ್ವ ಹಿಂದೂ ಪರಿಷತ್‌ ಕೂಡ 2015ರಲ್ಲಿ ಅಂಗೀಕರಿಸಿತ್ತು.

‘ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಏನೂ ಇಲ್ಲ. ಎಲ್ಲ ವಿಚಾರಗಳಲ್ಲಿಯೂ ಸರ್ಕಾರ ವಿಫಲವಾಗಿದೆ. ನಗರಗಳು ಮತ್ತು ಪಟ್ಟಣಗಳ ಹೆಸರು ಬದಲಾವಣೆಯು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡುವ ಯತ್ನ ಮಾತ್ರ’ ಎಂದು ವಿರೋಧ ಪಕ್ಷ ಎಸ್‌ಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.