ಲಖನೌ: ಚಿತ್ರಕೂಟದ ಜಗದ್ಗುರು ಸ್ವಾಮಿ ರಾಮ್ ಭದ್ರಾಚಾರ್ಯ ದಿವ್ಯಾಂಗ್ ವಿಶ್ವವಿದ್ಯಾಲಯದ ಕುಲಪತಿ ಸ್ವಾಮಿ ರಾಮ್ ಭದ್ರಾಚಾರ್ಯ ಜಿ ಮಹಾರಾಜ್ ಅವರ ವಿರುದ್ಧ ಯೂಟ್ಯೂಬ್ ಚಾನೆಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಆಕ್ಷೇಪಾರ್ಹ ವಿಡಿಯೊಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠವು ಫೇಸ್ಬುಕ್, ಇನ್ಸ್ಟಾಗ್ರಾಂ, ಗೂಗಲ್ ಮತ್ತು ಯೂಟ್ಯೂಬ್ಗೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ವಾರದೊಳಗೆ ಈ ಸಾಮಾಜಿಕ ಮಾಧ್ಯಮ ವೇದಿಕೆಗಳ ಕುಂದುಕೊರತೆ ನಿವಾರಣಾ ಅಧಿಕಾರಿಗಳು ನ್ಯಾಯಾಲಯಕ್ಕೆ ವಿವರಣೆ ಸಲ್ಲಿಸಬೇಕು ಮತ್ತು ಆ ಆಕ್ಷೇಪಾರ್ಹ ವಿಡಿಯೊವನ್ನು ತಕ್ಷಣವೇ ತೆಗೆದುಹಾಕಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅಲ್ಲದೆ, ಸಂಪಾದಕ ಶಶಾಂಕ್ ಶೇಖರ್ ಅವರ ಬೆಧಡಕ್ ಖಬರ್ ಯೂಟ್ಯೂಬ್ ಚಾನಲ್, ಫೇಸ್ಬುಕ್, ಇನ್ಸ್ಟಾ ಖಾತೆ ವಿರುದ್ಧ ಕ್ರಮಕ್ಕೆ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಲಾಗಿದೆ.
ಶರದ್ ಚಂದ್ರ ಶ್ರೀವಾಸ್ತವ ಮತ್ತು ಇತರರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಗೀತಾ ಚಂದ್ರ ಮತ್ತು ಬ್ರಿಜ್ ರಾಜ್ ಸಿಂಗ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಇದೇವೇಳೆ, ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ವ್ಯವಸ್ಥೆ ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲೂ ಕೋರಲಾಗಿತ್ತು.
ಪದೇ ಪದೇ ಮನವಿ ಮಾಡಿದರೂ ಆಕ್ಷೇಪಾರ್ಹ ವಿಡಿಯೊವನ್ನು ತೆಗೆಯಲು ಸಂಪಾದಕರು ನಿರಾಕರಿಸಿದ್ದು, ಸತತವಾಗಿ ಹಂಚಿಕೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಅಲ್ಲದೆ, ಸಂತ್ರಸ್ತರು ಹುಟ್ಟಿನಿಂದ ಅಂಧರಾಗಿದ್ದು, ಅವರ ಅಂಗವಿಕಲತೆಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಡಿಯೊವನ್ನು ಹಂಚಿಕೆ ಮಾಡಲಾಗುತ್ತಿದ್ದು, ವಿಡಿಯೊಗೆ ನಿಷೇಧ ವಿಧಿಸಬೇಕೆಂದೂ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.