ಅಂಬಾಲಾ (ಹರ್ಯಾಣ): ಅಧಿಕ ಪ್ರಮಾಣದಲ್ಲಿ ಸರಕುಗಳನ್ನು ಹೇರಿಕೊಂಡು ಬರುತ್ತಿದ್ದ ಟ್ರಕ್ಗಳ ತಪಾಸಣೆ ನಡೆಸಿ ದಂಡ ವಿಧಿಸಿದ ಅಂಬಾಲಾದ ಹೆಚ್ಚುವರಿ ಉಪ ಆಯುಕ್ತರಾದ ಪ್ರೀತಿ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ ರಾತ್ರಿ ಆರ್ಟಿಎ ಕಾರ್ಯದರ್ಶಿ ಕೂಡಾ ಆಗಿರುವ ಪ್ರೀತಿ ಅವರು ಅಂಬಾಲ -ನರೇನ್ಗಢ್ ಹೆದ್ದಾರಿಯಲ್ಲಿ ಟ್ರಕ್ಗಳ ತಪಾಸಣೆ ನಡೆಸುತ್ತಿದ್ದರು. ಅಧಿಕ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬಂದ ಟ್ರಕ್ ಮತ್ತು ಇತರ ವಾಹನಗಳಿಗೂ ಅವರು ದಂಡ ವಿಧಿಸಿದ್ದರು.
ಕೆಲವು ಟ್ರಕ್ಗಳನ್ನು ಹರ್ಯಾಣ- ಪಂಜಾಬ್ ಗಡಿ ಪ್ರದೇಶದಲ್ಲಿರುವ ಹಂಡೆಸರಾ ಗ್ರಾಮದಲ್ಲಿ ನಿಲ್ಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು ಕೆಲಸ ಮುುಗಿಸಿ ಕಾಲಾ ಅಂಬ್ನಿಂದ ಆರ್ಟಿಎ ಸಹೋದ್ಯೋಗಿಗಳೊಂದಿಗೆ ಅಂಬಾಲಾ ನಗರಕ್ಕೆ ತೆರಳಿದ್ದರು.
ಅಲ್ಲಿಗೆ ತಲುಪಿದಾಗದ ಸುಮಾರು 60- 70 ಮಂದಿದುಷ್ಕರ್ಮಿಗಳು ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಆರ್ಟಿಎ ಇಲಾಖೆಯ ಎರಡು ವಾಹನಗಳನ್ನು ದುಷ್ಕರ್ಮಿಗಳುಹಾನಿ ಮಾಡಿದ್ದಾರೆ. ತಕ್ಷಣವೇ ಪ್ರೀತಿ ಅವರು ಅಲ್ಲಿಂದ ತಪ್ಪಿಸಿಕೊಂಡು ಪಂಜೋಕ್ರಾ ಪೊಲೀಸ್ ಠಾಣೆಗೆ ತಲುಪಿದರು ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಮಾಹಿತಿ ಸಿಕ್ಕಿದ ಕೂಡಲೇ ಮೂವರು ಡಿಎಸ್ಪಿ ಮತ್ತು ಉಪ ವಿಭಾಗೀಯ ಮೆಜಿಸ್ಟ್ರೇಟರ್ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೀತಿ, ಸುಮಾರು 60-70 ಮಂದಿಯ ತಂಡ ತಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ, ಸರಕು ವಾಹನಗಳ ಮೇಲೆ ಕ್ರಮ ಜರುಗಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಹೇಳಿದ್ದಾರೆ. ಈಬಗ್ಗೆ ಕೇಸು ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ಡಿಎಸ್ಪಿ ಸುಲ್ತಾನ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.