ADVERTISEMENT

ಕಾಶ್ಮೀರ: ಬೆಂಗಾವಲು ವಾಹನಕ್ಕಾಗಿ ಅಂಬುಲೆನ್ಸ್‌, ಶಾಲಾ ವಾಹನಕ್ಕೆ ತಡೆ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 20:15 IST
Last Updated 16 ಮಾರ್ಚ್ 2019, 20:15 IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಂಗಾವಲು ವಾಹನ ಸಾಗುವ ರಸ್ತೆಯಲ್ಲಿ ಶಾಲಾ ವಾಹನ ಮತ್ತು ಅಂಬುಲೆನ್ಸ್‌ಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಈ ಬಗ್ಗೆ ಭದ್ರತಾ‍ಪಡೆಗಳು ತೀರ್ಮಾನ ಕೈಗೊಂಡಿವೆ.

‘ಜನಸ್ನೇಹಿ ಬೆಂಗಾವಲು ವಾಹನ ಸಂಚಾರ’ ಸಂಬಂಧ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಶಾಲಾ ವಾಹನ ಮತ್ತು ಅಂಬುಲೆನ್ಸ್‌ಗಳಿಗೆ ತಡೆ ನೀಡುವುದನ್ನು ಮಾನವೀಯ ಕಾರಣಗಳಿಗಾಗಿ ಕೈಬಿಡಲಾಗಿದೆ ಎಂದು ಸಿಆರ್‌ಪಿಎಫ್‌ ಮಹಾನಿರ್ದೇಶಕ ರವಿದೀಪ್‌ ಸಿಂಗ್‌ ಹೇಳಿದ್ದಾರೆ.

‌ಬೆಂಗಾವಲು ವಾಹನ ಸಾಗುವಾಗ ಅಗತ್ಯ ಸೇವೆಗಳ ವಾಹನಗಳಿಗೆ ಆದ್ಯತೆ ನೀಡಲಾಗುವುದು. ಶಾಲಾ ಮಕ್ಕಳು ಮತ್ತು ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ಹೇಳಿದ್ದಾರೆ.

ADVERTISEMENT

ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಸಾಗುತ್ತಿದ್ದ ವಾಹನವನ್ನು ಪಾಕಿಸ್ತಾನದ ಉಗ್ರನೊಬ್ಬ ಸ್ಫೋಟಿಸಿದ್ದ 40 ಯೋಧರು ಮೃತಪಟ್ಟಿದ್ದರು. ಇದಾದ ಮಾರನೇ ದಿನವೇ ಶ್ರೀನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌, ಭದ್ರತಾ ಪಡೆಗಳ ಬೆಂಗಾವಲು ವಾಹನಗಳು ಸರಾಗವಾಗಿ ಸಾಗಲು ನಾಗರಿಕ ವಾಹನಗಳನ್ನು ತಡೆಯಲಾಗುವುದು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬುದು ನಿಜ. ಆದರೆ ಇದಕ್ಕಾಗಿ ಸಹಕಾರ ಅಗತ್ಯ ಎಂದು ಹೇಳಿದ್ದರು.

ಕೇಂದ್ರದ ಈ ನಿರ್ಧಾರದಿಂದಾಗಿ ರೋಗಿಗಳು ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಕಾಶ್ಮೀರ ಕಣಿವೆಯಾದ್ಯಂತ ಇದಕ್ಕೆ ವಿರೋಧವ್ಯಕ್ತವಾಗಿತ್ತು. ಬೆಂಗಾವಲು ವಾಹನಗಳಿಂದಾಗಿ ಸಾರ್ವಜನಿಕರು ತೊಂದರೆಪಡುವುದು ಸಾಮಾಜಿಕ ಮಾಧ್ಯಮಗಳಿಗೆ ಚರ್ಚೆಗೊಳಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.