ADVERTISEMENT

ಅಮರಾವತಿ ಔಷಧ ವ್ಯಾಪಾರಿಯ ಹತ್ಯೆ: ಮಾಸ್ಟರ್‌ಮೈಂಡ್‌ ಬಂಧನ

ಪಿಟಿಐ
Published 3 ಜುಲೈ 2022, 5:14 IST
Last Updated 3 ಜುಲೈ 2022, 5:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‌ಮುಂಬೈ: ಪೂರ್ವ ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಅವರ ಹತ್ಯೆಯು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ನಡೆದಿದೆ. ಪ್ರಕರಣದ ಮಾಸ್ಟರ್‌ಮೈಂಡ್‌ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಷ್ಟ್ರದ ಗಮನ ಸೆಳೆದಿರುವ ಈ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಯು ಎನ್‌ಐಎ ತನಿಖೆಗೆ ನೀಡಿದೆ.

ಹತ್ಯೆಯ ಮಾಸ್ಟರ್‌ಮೈಂಡ್‌ನನ್ನೂ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದು ಏಳನೇ ಬಂಧನ. ಅಮರಾವತಿ ನಗರ ಅಪರಾಧ ವಿಭಾಗದ ಪೊಲೀಸರು ಸ್ಥಳೀಯ ನಿವಾಸಿ ಇರ್ಫಾನ್ ಖಾನ್ (32) ನನ್ನು ನಾಗ್ಪುರದಲ್ಲಿ ಸಂಜೆ ಬಂಧಿಸಿದರು. ಅಮರಾವತಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ (54) ಅವರನ್ನು ಕೊಲೆ ಮಾಡಲು ಈತ ಸಂಚು ರೂಪಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ಡಾ.ಆರತಿ ಸಿಂಗ್ ಹೇಳಿದ್ದಾರೆ.

ADVERTISEMENT

ಅಮರಾವತಿಯ ಶ್ಯಾಮ್ ಚೌಕ್ ಪ್ರದೇಶದ ಘಂಟಾಘರ್ ಬಳಿ ಜೂನ್ 21 ರಂದು ರಾತ್ರಿ 10.30 ರ ಸುಮಾರಿಗೆ ಕೊಲ್ಹೆ ಅವರನ್ನು ಇರಿದು ಹತ್ಯೆ ಮಾಡಲಾಗಿತ್ತು. ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ, ಕೊಲ್ಹೆ ವಾಟ್ಸಾಪ್ ಗ್ರೂಪ್‌ಗಳಲ್ಲಿ ಪೋಸ್ಟ್‌ ಶೇರ್ ಮಾಡಿದ್ದರು. ಇದಕ್ಕಾಗಿ ಕೊಲೆ ನಡೆದಿರಬಹುದು ಎಂದು ಉಪ ಪೊಲೀಸ್ ಆಯುಕ್ತ ವಿಕ್ರಮ್ ಸಾಲಿ ಸುದ್ದಿಗಾರರಿಗೆ ತಿಳಿಸಿದರು.

ಇದಕ್ಕೂ ಮುನ್ನ ಪೊಲೀಸರು ಮುದಸ್ಸರ್ ಅಹಮದ್ ಅಲಿಯಾಸ್ ಸೋನು ರಜಾ ಶೇಖ್ ಇಬ್ರಾಹಿಂ (22), ಶಾರುಖ್ ಪಠಾಣ್ ಅಲಿಯಾಸ್ ಬಾದಶಾ ಹಿದಾಯತ್ ಖಾನ್ (25), ಅಬ್ದುಲ್ ತೌಫಿಕ್ ಅಲಿಯಾಸ್ ನಾನು ಶೇಖ್ ತಸ್ಲೀಂ (24), ಶೋಬ್ ಖಾನ್ ಅಲಿಯಾಸ್ ಭೂರ್ಯ ಸಬೀರ್ ಖಾನ್ (22), ಅತೀಬ್ ರಶೀದ್ ಆದಿಲ್ ರಶೀದ್ (22) ಮತ್ತು ಯೂಸುಫ್ ಖಾನ್ ಬಹದ್ದೂರ್ ಖಾನ್ (44) ಎಂಬುವವರನ್ನು ಬಂಧಿಸಿದ್ದರು.

ಹತ್ಯೆಗೂ ಮೂರು ದಿನಗಳ ಮೊದಲು ಆರೋಪಿಗಳು ಕೊಲ್ಹೆಯವರ ಚಲನವಲನಗಳನ್ನು ಗಮನಿಸಿದ್ದರು ಎಂದು ಸಾಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.