ಬಿಲ್ಗೇಟ್ಸ್ ಭೇಟಿಯಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡ
ಅಮರಾವತಿ: ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ರಾಜ್ಯವನ್ನು ಜಾಗತಿಕ ಆರೋಗ್ಯ, ಶಿಕ್ಷಣ ಮತ್ತು ನಾವೀನ್ಯತೆ ಕೇಂದ್ರವಾಗಿ ಪರಿವರ್ತಿಸಲು ಪಾಲುದಾರಿಕೆಯನ್ನು ಬೆಳೆಸುವ ಕುರಿತು ಚರ್ಚಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನಾಯ್ಡು, ‘ಬಹಳ ಸಮಯದ ನಂತರ ಮತ್ತೆ ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿರುವುದು ಸಂತಸ ತಂದಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಬಗ್ಗೆ ಅವರಿಗಿರುವ ಆಸ್ತಕಿ ಸ್ಪೂರ್ತಿದಾಯಕವಾಗಿದೆ. ಭೇಟಿ ವೇಳೆ ಆರೋಗ್ಯ ಮತ್ತು ಕೃತಕ ಬುದ್ಧಿಮತ್ತೆ ಆವಿಷ್ಕಾರದಲ್ಲಿ ಸಹಯೋಗದ ಅವಕಾಶಗಳ ಬಗ್ಗೆ ಚರ್ಚಿಸಿದ್ದೇವೆ. ಆಂಧ್ರ ಪ್ರದೇಶದ ಪ್ರಗತಿಯಲ್ಲಿ ಬಿಎಂಜಿಎಫ್(ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್) ಸಹಭಾಗಿತ್ವವನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಆಂಧ್ರಪ್ರದೇಶವು ಬದ್ಧವಾಗಿದ್ದು, ರಾಜ್ಯದಲ್ಲಿ ಪ್ರಸ್ತಾವಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯದ ಸಲಹಾ ಮಂಡಳಿಗೆ ಸೇರಲು ಗೇಟ್ಸ್ ಅವರನ್ನು ಆಹ್ವಾನಿಸಿರುವುದಾಗಿ ಹೇಳಿದ್ದಾರೆ.
ದಕ್ಷಿಣ ಭಾರತದಾದ್ಯಂತ ಬಿಎಂಜಿಎಫ್ ಉಪಕ್ರಮಗಳಿಗೆ ಆಂಧ್ರಪ್ರದೇಶವು ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ ಎಂದು ಗೇಟ್ಸ್ ಅವರಿಗೆ ಭರವಸೆ ನೀಡಿದ್ದೇವೆ. ಅದರ ವ್ಯಾಪ್ತಿ ವರ್ಧಿಸಲು ವೇದಿಕೆ ಒದಗಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.