ಪಡಿತರ ಅಕ್ಕಿ
ಅಮರಾವತಿ: ಪಡಿತರ ಅಕ್ಕಿಯ ಅಕ್ರಮ ಸಾಗಣೆ ತಡೆಗಾಗಿ ‘ರ್ಯಾಪಿಡ್ ಕಿಟ್ಸ್’ ಬಳಕೆಗೆ ಚಾಲನೆ ಸೇರಿದಂತೆ ನಾಗರಿಕ ಪೂರೈಕೆ ಇಲಾಖೆಯಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಆಂಧ್ರ ಪ್ರದೇಶದ ನಾಗರಿಕ ಪೂರೈಕೆ ಸಚಿವ ಎನ್.ಮನೋಹರ್ ಅವರ ತಿಳಿಸಿದ್ದಾರೆ.
ಕಳ್ಳಸಾಗಣೆ ಜಾಲವನ್ನು ನಿಯಂತ್ರಿಸಲು ಮತ್ತು ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಶೀಘ್ರ ಕ್ರಮಕೈಗೊಳ್ಳಲು ಹೊಸ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
ಪಡಿತರ ಅಕ್ಕಿಯ ಅಕ್ರಮ ಸಾಗಣೆ ತಡೆಗಾಗಿ ರ್ಯಾಪಿಡ್ ಕಿಟ್ಸ್ ಪರಿಚಯಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅಕ್ಕಿ ಪಡೆದು ಅದನ್ನು ವಿವಿಧೆಡೆ ಪೂರೈಕೆ ಮಾಡುತ್ತಿರುವ ಜಾಲ ಪತ್ತೆಯಾಗಿ 700 ಮೊಬೈಲ್ ರ್ಯಾಪಿಡ್ ಕಿಟ್ಸ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕಿಟ್ ಪೊಟಾಷ್ಯಿಯಂ ಥಿಯೊಸೈಯನೇಡ್ ಮತ್ತು ಹೈಡ್ರೊಕ್ಲೋರಿಕ್ ಆ್ಯಸಿಡ್ ಅಂಶವನ್ನು ಒಳಗೊಂಡಿದ್ದು, ಇದು ಸಾರವರ್ಧಿತ ಪಡಿತರ ಅಕ್ಕಿಯನ್ನು ಕೆಂಪು ಬಣ್ಣಕ್ಕೆ ಪರಿವರ್ತಿಸುತ್ತದೆ. ಸಾಮಾನ್ಯ ಅಕ್ಕಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಈ ಕಿಟ್ ಮೂಲಕ ಅಧಿಕಾರಿಗಳು ಸ್ಥಳದಲ್ಲಿಯೇ ಅಕ್ಕಿಯನ್ನು ಪರಿಶೀಲಿಸಿ, ಅಕ್ರಮ ಸಾಗಣೆದಾರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.