ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಸೋಮವಾರ ರಾಜ್ಯ ಸಚಿವ ಸಂಪುಟವನ್ನುಪುನರ್ ರಚಿಸಿದ್ದು, 13 ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ತಮ್ಮ ಹಿಂದಿನ ಸಂಪುಟದಲ್ಲಿದ್ದ 11 ಮಂದಿಯನ್ನು ಹೊಸ ಸಂಪುಟಕ್ಕೆ ಮತ್ತೆ ಸೇರಿಸಿಕೊಂಡಿದ್ದಾರೆ.
ರಾಜಧಾನಿ ಅಮರಾವತಿಯಲ್ಲಿರುವ ರಾಜ್ಯ ಸಚಿವಾಲಯದ ಬಳಿ ಸೋಮವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಬಿ. ಭೂಷಣ ಹರಿಚಂದನ್ ಅವರು 25 ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ವಿಧಾನ ಪರಿಷತ್ತಿನ ಯಾವ ಸದಸ್ಯರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಹೊಸ ಸಂಪುಟದಲ್ಲಿ ಹಿಂದುಳಿದ ವರ್ಗಗಳಿಗೆ ಸಿಂಹ ಪಾಲು, ಅಂದರೆ 10 ಸ್ಥಾನಗಳು ದೊರೆತಿವೆ.ಮುಖ್ಯಮಂತ್ರಿ ಸೇರಿದಂತೆ ಇಬ್ಬರು ಅಲ್ಪಸಂಖ್ಯಾತ ಸಮುದಾಯದವರು, ಐವರು ಪರಿಶಿಷ್ಟ ಜಾತಿ ಮತ್ತು ಒಬ್ಬರು ಪರಿಶಿಷ್ಟ ಪಂಗಡದವರು ಸಂಪುಟದಲ್ಲಿದ್ದಾರೆ.ರೆಡ್ಡಿ ಮತ್ತು ಕಾಪು ಸಮುದಾಯದ ತಲಾ ನಾಲ್ವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಸಂಪುಟದಲ್ಲಿ ನಾಲ್ವರು ಮಹಿಳಾ ಸದಸ್ಯರಿಗೆ ಅವಕಾಶ ನೀಡಲಾಗಿದೆ. ಕಳೆದ ಸಂಪುಟದಲ್ಲಿ ಮೂವರು ಮಹಿಳೆಯರಿದ್ದರು. ಹಿಂದಿನ ಸಂಪುಟದಲ್ಲಿ ತಲಾ ಒಬ್ಬರು ಪ್ರತಿನಿಧಿಯನ್ನು ಹೊಂದಿದ್ದ ಕಮ್ಮ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯದವರಿಗೆ ಈ ಬಾರಿ ಅವಕಾಶ ದೊರೆತಿಲ್ಲ.
ಬ್ರಾಹ್ಮಣ ಸಮುದಾಯಕ್ಕೆ ಮತ್ತೊಮ್ಮೆ ಸಚಿವ ಸ್ಥಾನ ನಿರಾಕರಿಸಲಾಗಿದೆ. ರಾಜ್ಯದ ಒಟ್ಟು 26 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ.
ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಇದನ್ನು ‘ಸಾಮಾಜಿಕ ಕ್ಯಾಬಿನೆಟ್’ ಎಂದು ಬಣ್ಣಿಸಿದೆ. ಹಿಂದುಳಿದ ವರ್ಗಗಳು, ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಶೇ 70ರಷ್ಟು ಪ್ರಾತಿನಿಧ್ಯ ದೊರೆತಿದೆ ಎಂದು ಪಕ್ಷ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.