ಭವಾನಿಪಟ್ನ: ಒಡಿಶಾದ ಕಾಳಹಂದಿ ಜಿಲ್ಲೆಯ ಕಾರ್ಲಪತ್ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಆನೆಗಳ ಸರಣಿ ಸಾವು ಮುಂದುವರಿದಿದ್ದು, ಕೆರೆಯೊಂದರ ಬಳಿ ಮತ್ತೊಂದು ಹೆಣ್ಣು ಆನೆ ಮೃತಪಟ್ಟಿದೆ.
ಕಾರ್ಲಪತ್ ವನ್ಯಜೀವಿ ಅಭಯಾರಣ್ಯದಲ್ಲಿ ಎರಡು ವಾರಗಳಲ್ಲಿ ಒಂದು ಮರಿ ಆನೆ ಹಾಗೂ ಐದು ಹೆಣ್ಣು ಆನೆಗಳು ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿ ತಿಳಿಸಿದ್ದಾರೆ.
2018ರ ಆನೆ ಗಣತಿಯ ಪ್ರಕಾರ ಈ ಅಭಯಾರಣ್ಯದಲ್ಲಿ 17 ಆನೆಗಳಿದ್ದವು. ‘ಆನೆಗಳ ಸಾವಿಗೆ ರಕ್ತವಿಷ (ಹೆಮರಾಜಿಕ್ ಸೆಪ್ಟಿಸೆಮಿಯಾ) ಕಾರಣವಾಗಿದೆ ಎಂದು ಡಿಎಫ್ಒ ಅಶೋಕ್ ಕುಮಾರ್ ತಿಳಿಸಿದ್ದಾರೆ. ಆದರೆ ಕಾಡಿನಲ್ಲಿರುವ ಇತರ ವನ್ಯಜೀವಿಗಳು ಅಥವಾ ಕಾಡಿಗೆ ಬರುವ ಅಕ್ಕಪಕ್ಕದ ಊರುಗಳ ಜಾನುವಾರುಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿಲ್ಲ.
ಜಾನುವಾರುಗಳಿಗೆ ರಕ್ತವಿಷ ಆಗುವುದನ್ನು ತಪ್ಪಿಸುವ ಸಲುವಾಗಿಯೇ ‘ಎಚ್ಎಸ್‘ ಲಸಿಕೆ ಹಾಕಲಾಗುತ್ತದೆ. ಇದೀಗ ಆನೆಗೂ ರಕ್ತವಿಷ ಕಾಯಿಲೆ ಬರುವ ಅಂಶ ಗೊತ್ತಾಗಿದೆ ಎಂದು ರಾಜ್ಯದ ವನ್ಯಜೀವಿ ಆರೋಗ್ಯ ತಜ್ಞ ನಿರಂಜನ್ ಸಾಹು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.