ADVERTISEMENT

ಸಶಸ್ತ್ರ ಪಡೆಗಳು ದೇಶದ್ದು, ಬಿಜೆಪಿ, ಮೋದಿ ಅಥವಾ ಶಾ ಅವರದಲ್ಲ:ಡೆರಿಕ್ ಒ ಬ್ರಿಯೆನ್

ಏಜೆನ್ಸೀಸ್
Published 3 ಮಾರ್ಚ್ 2019, 13:22 IST
Last Updated 3 ಮಾರ್ಚ್ 2019, 13:22 IST
   

ಕೋಲ್ಕತ್ತ: ಬಿಜೆಪಿ ಮತ್ತು ಅದರ ಅಧ್ಯಕ್ಷ ಅಮಿತ್ ಶಾ ಅವರು ಬೇಧ ಕಲ್ಪಿಸುವ ಮತ್ತು ದ್ವೇಷ ರಾಜಕಾರಣ ಮಾಡುವ ಕೊಳಕು ತತ್ವ ಪ್ರತಿಪಾದಕರು ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಒ ಬ್ರಿಯೆನ್ ಅವರು ಹೇಳಿದ್ದಾರೆ.

ವೋಟ್ ಬ್ಯಾಂಕ್ ರಾಜಕೀಯದ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ನೋಡಿ.ಅಮಿತ್ ಶಾ ಮತ್ತು ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ದೇಶಪ್ರೇಮದ ಬಗ್ಗೆ ಅವರ ಭಾಷಣಗಳನ್ನು ನಾವು ಕೇಳಬಾರದು.ನಮ್ಮ ಸಶಸ್ತ್ರ ಪಡೆಗಳು ಭಾರತಕ್ಕೆ ಸೇರಿದ್ದು, ಮೋದಿ- ಶಾ- ಬಿಜೆಪಿಯದ್ದು ಅಲ್ಲ ಎಂದಿದ್ದಾರೆ ಡೆರಿಕ್.

ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ಪುಲ್ವಾಮಾ ಉಗ್ರ ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್ ಯೋಧರ ಹೆಸರು ಹೇಳಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ ಬೆನ್ನಲ್ಲೇ ಡೆರಿಕ್ ಬಿಜೆಪಿ ವಿರುದ್ಧ ಟ್ವೀಟ್ ದಾಳಿ ಮಾಡಿದ್ದಾರೆ.

ನಾವು ವಿಪಕ್ಷದಲ್ಲಿರುವ ಕಾರಣ ವಾಯುದಾಳಿಯ ವಿವರಗಳನ್ನು ಅರಿಯಲು ಬಯಸುತ್ತೇನೆ. ಎಲ್ಲಿ ಬಾಂಬ್ ದಾಳಿ ನಡೆಸಿದ್ದು? ಎಷ್ಟು ಜನ ಸತ್ತಿದ್ದಾರೆ? ನಾನು ನ್ಯೂಯಾರ್ಕ್ ಟೈಮ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್ ಓದಿದೆ. ವಾಯುದಾಳಿಯಲ್ಲಿ ಯಾವುದೇ ನಾಶ ನಷ್ಟ ಸಂಭವಿಸಿಲ್ಲ ಎಂದು ಆ ವರದಿಯಲ್ಲಿ ಹೇಳಿದೆ.ಇನ್ನು ಕೆಲವು ಸುದ್ದಿ ಸಂಸ್ಥೆಗಳು ಓರ್ವ ಮೃತಪಟ್ಟಿದ್ದಾನೆ ಎಂದಿವೆ. ನಮಗೆ ಈ ಬಗ್ಗೆ ವಿವರಗಳು ಬೇಕು.

ADVERTISEMENT

ದೇಶಪ್ರೇಮದ ಪ್ರಮಾಣಪತ್ರ ನೀಡುವ ಹಕ್ಕು ಬಿಜೆಪಿಗೆ ಇಲ್ಲ. ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದಾಗ ಖಾಕಿ ಚಡ್ಡಿ ಧರಿಸಿದ ಜನರು ಅಡಗಿ ಕುಳಿತಿದ್ದರು. ಅಂಥವರು ಈಗ ದೇಶಪ್ರೇಮದ ಪ್ರಮಾಣ ಪತ್ರ ನೀಡುತ್ತಿದ್ದಾರೆ.ಥ್ಯಾಂಕ್ಸ್ ಆದರೆ ನೋ ಥ್ಯಾಂಕ್ಸ್ ಎಂದು ಡೆರಿಕ್ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.