ನವದೆಹಲಿ: ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿಯ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ಸೇನೆ ಮತ್ತು ಚೀನಾ ಸೇನೆಯ ಕಮಾಂಡರ್ ಮಟ್ಟದ ಅಧಿಕಾರಿಗಳ ಮಧ್ಯೆ ಆರನೇ ಸುತ್ತಿನ ಮಾತುಕತೆ ಸೋಮವಾರ ನಡೆಯಿತು.
ಎಲ್ಎಸಿಯಿಂದ ಆಚೆ ಚೀನಾ ನೆಲದಲ್ಲಿ ಇರುವ ಮೊಲ್ಡೊದಲ್ಲಿ ಸಭೆ ನಡೆಯಿತು. ಬೆಳಿಗ್ಗೆ ಆರಂಭವಾದ ಸಭೆಯಲ್ಲಿ ಭಾರತದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರ ನೇತೃತ್ವದ ನಿಯೋಗವು ಭಾಗಿಯಾಗಿತ್ತು. ಈ ನಿಯೋಗದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ರ್ಯಾಂಕ್ನ ಅಧಿಕಾರಿಯೂ ಭಾಗವಹಿಸಿದ್ದರು.
ವಿದೇಶಾಂಗ ವ್ಯವಹಾರದ ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದು ಇದೇ ಮೊದಲು. ಸೆಪ್ಟೆಂಬರ್ 10ರಂದು ಮಾಸ್ಕೊದಲ್ಲಿ ನಡೆದ ಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಒಪ್ಪಂದ ಮಾಡಿಕೊಂಡಿದ್ದರು. ಎಲ್ಎಸಿಯಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಮಾಡಿಕೊಂಡಿದ್ದ ಈ ಒಪ್ಪಂದವನ್ನು ಜಾರಿಗೆ ತರಲು ಕಾಲಮಿತಿ ಹಾಕಿಕೊಳ್ಳುವಬಗ್ಗೆ ಸೋಮವಾರದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.