ADVERTISEMENT

ಪಾಕ್‌ನಿಂದ ಭಾರತದ ಮೀನುಗಾರರ ಬಂಧನ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 15:20 IST
Last Updated 25 ಆಗಸ್ಟ್ 2023, 15:20 IST
   

ನವದೆಹಲಿ: ದಾರಿತಪ್ಪಿ ಪಾಕಿಸ್ತಾನದ ಜಲಗಡಿಯನ್ನು ಪ್ರವೇಶಿಸುವ ಭಾರತದ ಮೀನುಗಾರರನ್ನು ಬಂಧಿಸುತ್ತಿರುವ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂ ಕೋರ್ಟ್‌,‘ರಾಜಕೀಯ ವಿಷಯಗಳನ್ನು ರಾಜಕೀಯವಾಗಿಯೇ ಪರಿಹರಿಸಬೇಕು’ ಎಂದು ಶುಕ್ರವಾರ ಹೇಳಿದೆ.

ಮೀನುಗಾರರನ್ನು ಬಿಡುಗಡೆಗೊಳಿಸುವಂತೆ ಪಾಕಿಸ್ತಾನಕ್ಕೆ ನಿರ್ದೇಶನ ನೀಡಲು ನಮಗೆ ಸಾಧ್ಯವೇ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಪ್ರಶ್ನಿಸಿದೆ.

ಈ ವಿಚಾರವಾಗಿ ಗುಜರಾತ್‌ನ ಇಬ್ಬರು ಹಾಗೂ ಮಹಾರಾಷ್ಟ್ರದ ಒಬ್ಬರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು.

ADVERTISEMENT

ಕೈದಿಗಳ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ 2008ರಲ್ಲಿ ರಚಿಸಲಾದ ಭಾರತ ಮತ್ತು ಪಾಕಿಸ್ತಾನದ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಾಂಗ ಸಮಿತಿಯನ್ನು ಪುನಶ್ಚೇತನಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠವನ್ನು ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಈ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ಮೊರೆ ಹೋಗುವಂತೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.