ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯು ಸಹಜತೆಯಿಂದ ದೂರವಿದೆ. ಆದರೆ ಕಣಿವೆಯಲ್ಲಿ ಸಹಜಸ್ಥಿತಿ ಇದೆ ಎಂದು ಸರ್ಕಾರ ಬಿಂಬಿಸುತ್ತಿದೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟೀಕಿಸಿದರು.
ಇಲ್ಲಿನ ಎನ್ಸಿ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಸರ್ಕಾರ ಹೇಳಿದಂತೆ ಕಣಿವೆಯಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದರೆ, ಇಲ್ಲಿನ ಪ್ರಸಿದ್ಧ ಜಾಮೀಯ ಮಸೀದಿಯಲ್ಲಿ ಶಾಬ್–ಎ–ಕದ್ರ್ ಹಾಗೂ ಜುಮಾತ್–ಉಲ್–ವಿದಾ ಪ್ರಾರ್ಥನೆಗೆ ನಿರ್ಬಂಧ ವಿಧಿಸಿರುವುದೇಕೆ’ ಎಂದು ಪ್ರಶ್ನಿಸಿದರು.
‘ಪ್ರವಾಸಿಗರ ಭೇಟಿಯನ್ನೇ ಸಹಜತೆ ಎಂದು ಬಿಂಬಿಸಲಾಗಿದೆ. ವಾಸ್ತವ ಸ್ಥಿತಿಯೇ ಬೇರೆಯಿದೆ. ಪವಿತ್ರ ರಂಜಾನ್ ಮಾಸದಲ್ಲಿ ಸೆಹ್ರಿ ಹಾಗೂ ಇಫ್ತಾರ್ ಸಮಯದಲ್ಲಿ ವಿದ್ಯುತ್ ಕಡಿತವು ಉದ್ದೇಶಪೂರ್ವಕ ಪ್ರಯತ್ನವಾಗಿದ್ದು, ಕಣಿವೆಯಲ್ಲಿ ದೀರ್ಘಾವಧಿಯು ವಿದ್ಯುತ್ ಕಡಿತವು ಇದು ಪ್ರಸ್ತುತ ಕೇಂದ್ರಾಡಳಿತ ಪ್ರದೇಶದ ಆಡಳಿತದ ಹೊಣೆಹೊತ್ತವರ ಅಸಮರ್ಥತೆಯನ್ನು ತೋರಿಸುತ್ತದೆ’ ಎಂದು ಇಲ್ಲಿನ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.