ನವದೆಹಲಿ: ಹುತಾತ್ಮರ ದಿನದ ಅಂಗವಾಗಿ ದೆಹಲಿ ಸರ್ಕಾರವು ಸುದ್ದಿ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ತಪ್ಪಾಗಿದೆ. ಮುಂದೆ ಇಂತಹ ತಪ್ಪುಗಳು ಸಂಭವಿಸುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಬುಧವಾರ ಪ್ರಕಟಗೊಂಡ ದೆಹಲಿ ಸರ್ಕಾರದ ಜಾಹೀರಾತಿನಲ್ಲಿ ಕೇವಲ ಭಗತ್ ಸಿಂಗ್ ಅವರ ಭಾವಚಿತ್ರವನ್ನು ಮುದ್ರಿಸಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸಿಎಂ ಕೇಜ್ರಿವಾಲ್ ತಪ್ಪೊಪ್ಪಿಕೊಂಡು, ಮುಂದೆ ಹೀಗಾಗುವುದಿಲ್ಲ ಎಂದಿದ್ದಾರೆ.
ದೆಹಲಿ ವಿಧಾನಸಭೆಯ ಬಜೆಟ್ ಕಲಾಪದ ಮೊದಲ ದಿನ, ಹುತಾತ್ಮ ಯೋಧರಿಗೆ ನಮನ ಸಲ್ಲಿಕೆ ಸಂದರ್ಭ ಮಾತನಾಡಿದ ವಿಪಕ್ಷ ನಾಯಕ ರಾಮವೀರ ಸಿಂಗ್ ಬಿಧುರಿ, ದೆಹಲಿ ಸರ್ಕಾರವು ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಜಾಹೀರಾತಿನಲ್ಲಿ ಕೇವಲ ಶಹೀದ್ ಭಗತ್ ಸಿಂಗ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಇದರಲ್ಲಿ ಹುತಾತ್ಮರಾದ ಸುಖದೇವ್ ಮತ್ತು ರಾಜಗುರು ಅವರ ಭಾವಚಿತ್ರವಾಗಲಿ ಮತ್ತು ಹೆಸರಾಗಲಿ ಇಲ್ಲ. ರಾಷ್ಟ್ರದ ಹುತಾತ್ಮರನ್ನು ವಿಭಾಗಿಸಬಾರದು' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಸಿಎಂ ಜಾಹೀರಾತಿನಲ್ಲಿ ಆಗಿರುವ ತಪ್ಪನ್ನು ಗುರುತಿಸಬೇಕು. ದೆಹಲಿ ಅಸೆಂಬ್ಲಿ ಆವರಣದಲ್ಲಿರುವ ಶಹೀದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಪ್ರತಿಮೆಗಳ ಸಮೀಪ ಹುತಾತ್ಮ ಅಷ್ಫಾಕುಲ್ಲಾ ಖಾನ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು' ಎಂದು ಭಿದುರಿ ಒತ್ತಾಯಿಸಿದರು.
'ವಿಪಕ್ಷ ನಾಯಕರ ಮಾತುಗಳನ್ನು ಒಪ್ಪಿಕೊಳ್ಳುತ್ತೇನೆ. ನಾವು ಹುತಾತ್ಮ ಯೋಧರನ್ನು ವಿಭಾಗಿಸುವುದಿಲ್ಲ. ಇವತ್ತಿನ ಜಾಹೀರಾತಿನಲ್ಲಿ ತಪ್ಪಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಮುಂದೆ ಇಂತಹ ತಪ್ಪುಗಳು ಸಂಭವಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ' ಎಂದು ಕೇಜ್ರಿವಾಲ್ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.