ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು‘ಅಬಕಾರಿ ಹಗರಣ’ದ ಮುಖ್ಯ ಸೂತ್ರಧಾರ ಎಂದು ಬಿಜೆಪಿ ಶನಿವಾರ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ತನ್ನ ನೈಜ ಮುಖ ಬಹಿರಂಗವಾಗಿದ್ದು, ಗಮನವನ್ನು ಬೇರೆಡೆ ಸೆಳೆಯಲುಎಎಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಎಎಪಿ ರಾಜಕೀಯ ಬೆಳವಣಿಗೆ ಸಹಿಸದ ಬಿಜೆಪಿ, ಪಕ್ಷಕ್ಕೆ ನಿಯಂತ್ರಣ ಹೇರಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷಕ್ಕೆ ಠಾಕೂರ್ ತಿರುಗೇಟು ನೀಡಿದ್ದಾರೆ. ಎಎಪಿಯು ಹಲವು ಚುನಾವಣೆಗಳಲ್ಲಿ ಗೆಲ್ಲುವುದಾಗಿ ಹೇಳಿಕೊಂಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಲ್ಲಲು ಆಗಿಲ್ಲ ಎಂದಿದ್ದಾರೆ.
‘ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಖಾತೆ ತೆರೆಯಲೂ ಎಎಪಿಗೆ ಸಾಧ್ಯವಾಗಲಿಲ್ಲ. ಮೋದಿ ನೇತೃತ್ವದಲ್ಲಿ ಬಿಜೆಪಿಯು 2024ರ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದೆ’ ಎಂದು ಠಾಕೂರ್ ಹೇಳಿದ್ದಾರೆ.
‘ಇದು ‘ರೇವ್ಡಿ’ (ಉಚಿತ ಕೊಡುಗೆ) ಸರ್ಕಾರವಷ್ಟೇ ಅಲ್ಲ, ‘ಬೇವ್ಡಿ’ (ಕುಡುಕರ) ಸರ್ಕಾರ ಕೂಡಾ. ಸಂಪುಟದ ಒಪ್ಪಿಗೆ ಪಡೆಯದೆ ಅಬಕಾರಿ ಕಂಪನಿಗಳಿಗೆ ₹144 ಕೋಟಿ ಹಿಂತಿರುಗಿಸಿದ್ದು ಏಕೆ’ ಎಂದುಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ. ಮನೀಷ್ ಸಿಸೋಡಿಯಾ ಅವರನ್ನು ದುಡ್ಡಿನ ವ್ಯಕ್ತಿ ಎಂದು ಕರೆದಿರುವ ಠಾಕೂರ್, ಸಿಸೋಡಿಯಾ ಹಣ ಮಾಡುತ್ತಾರೆ ಹಾಗೂ ಮೌನವಾಗಿರುತ್ತಾರೆ ಎಂದು ಆರೋಪಿಸಿದ್ದಾರೆ. ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ ಗುಪ್ತಾ, ಲೋಕಸಭಾ ಸದಸ್ಯ ಮನೋಜ್ ತಿವಾರಿ ಅವರೂ ಕೇಜ್ರಿವಾಲ್ ವಿರುದ್ಧ ವಾಕ್ಸಮರ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.